ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೦

ಉತ್ತರಾಯಣ ಪುಣ್ಯಕಾಲಾರಂಭ ಎಂದು?

ಪಂಚಾಂಗಗಳ ಪ್ರಕಾರ ಉತ್ತರಾಯಣ ಪುಣ್ಯಕಾಲಾರಂಭವಾಗುವುದು ಮಕರ ಸಂಕ್ರಾಂತಿಯಂದು. ವಾಸ್ತವವಾಗಿ ಉತ್ತರಾಯಣ ಸುಮಾರು ಡಿಸೆಂಬರ್ ೨೧/೨೨ ರಂದೇ ಆರಂಭವಾಗುತ್ತದೆ ಅನ್ನುತ್ತಾರೆ ಖಗೋಲಶಾಸ್ತ್ರಜ್ಞರು. ಯಾವುದು ಸರಿ?  ಇದನ್ನು ಬಲು ಸುಲಭವಾಗಿ ನೀವೇ ಪತ್ತೆಹಚ್ಚಬಹುದು. ೧ ವರ್ಷ  ಕಾಲ ನೀವು ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯೋದಯವನ್ನು ವೀಕ್ಷಿಸಲು ಸಿದ್ಧರಿದ್ದರೆ.

ಪೂರ್ವಸಿದ್ಧತೆ:

ಪ್ರತೀದಿನ ಸೂರ್ಯೋದಯ ವೀಕ್ಷಿಸುವ ಸ್ಥಳ ನಿಗದಿಪಡಿಸಿ. ಆ ಸ್ಥಳವನ್ನು ಮತ್ತು ಆ ಸ್ಥಳದ ಭೌಗೋಲಿಕ ದಿಗ್ಬಿಂದುಗಳನ್ನು (ಅರ್ಥಾತ್, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ)  ಕನಿಷ್ಠ ಒಂದು ವರ್ಷ ಕಾಲ ಅಳಿಸಿ ಹೋಗದಂತೆ ಗುರುತಿಸಿ. ನಿಮ್ಮ ಮನೆಯ ತಾರಸಿಯ ಮೇಲಾದರೆ ಇವನ್ನು ಸೂಚಿಸುವ ಬಿಂದುಗಳನ್ನು ಇನ್ಯಾಮಲ್ ಬಣ್ಣದಿಂದ ಗುರುತಿಸಬಹುದು (ಚಿತ್ರ ೧).

ಮನೆಯ ಅಂಗಳವಾಗಿದ್ದರೆ ಕಬ್ಬಿಣ ಅಥವ ಕಲ್ಲಿನ ಗೂಟಗಳ ನೆರವಿನಿಂದ ಗುರುತಿಸಬಹುದು (ಯಾರೂ ಎಡವಿ ಬೀಳದಂತೆ). ದಿಕ್ಸೂಚಿಯ ನೆರವಿನಿಂದ ನೀವು ಕಾಂತೀಯ ದಿಗ್ಬಿಂದುಗಳನ್ನು ಗುರುತಿಸಬಹುದೇ ವಿನಾ ಭೌಗೋಲಿಕ ದಿಗ್ಬಿಂದುಗಳನ್ನಲ್ಲ. ಇವೆರಡೂ ಒಂದೇ ಆಗಿರುವುದಿಲ್ಲ. ಭೌಗೋಲಿಕ ದಿಗ್ಬಿಂದುಗಳನ್ನು ಗುರುತಿಸುವುದು ಹೇಗೆ ಎಂಬುದನ್ನು ತಿಳಿಯಲು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೩೭ ನೋಡಿ. ಕ್ಷಿತಿಜದ (ದಿಗಂತ, ಬಾನಂಚು, ಹಾರಿಜ, ಹರೈಸ್ ನ್) ಯಾವ ಬಿಂದುವಿನಲ್ಲಿ ಸೂರ್ಯೋದಯವಾಗುತ್ತದೆ ಎಂಬುದನ್ನು ಪ್ರತೀದಿನ ವೀಕ್ಷಿಸಿದ ನಂತರ ಅದನ್ನು ದಾಖಲಿಸಲು ಅನುಕೂಲವಾಗುವಂತೆ ಕಾಗದದ ದೊಡ್ಡ ಹಾಳೆಯಲ್ಲಿ (ಡ್ರಾಇಂಗ್ ಷೀಟ್) ಕ್ಷಿತಿಜವನ್ನು ಪ್ರತಿನಿಧಿಸುವ ವೃತ್ತ ರಚಿಸಿ, ಅದರಲ್ಲಿ ದಿಗ್ಬಿಂದುಗಳನ್ನು ಗುರುತಿಸಿ ಇಟ್ಟುಕೊಳ್ಳಿ. ವೀಕ್ಷಣಾ ಸ್ಥಲವನ್ನು ಈ ವೃತ್ತದ ಕೇಂದ್ರವು ಪ್ರತಿನಿಧಿಸುತ್ತದೆ (ಚಿತ್ರ ೨). ೧ ಕೋನಮಾಪಕ ಮತ್ತು ಸುಮಾರು ೧ ಮೀ ಉದ್ದದ ಬಳುಕದ ಸಪುರ ಕಡ್ಡಿಗಳನ್ನು (ಮರದ್ದು ಅಥವ ಲೋಹದ್ದು)  ಸಂಗ್ರಹಿಸಿ ಇಟ್ಟುಕೊಳ್ಳಿ.

ಮಾಡಬೇಕಾದದ್ದೇನು?

ಅನೇಕ ದಿನ ಪತ್ರಿಕೆಗಳಲ್ಲಿ ಮತ್ತು ಎಲ್ಲ ಪಂಚಾಂಗಗಳಲ್ಲಿ ಪ್ರತೀ ದಿನದ ಸೂರ್ಯೋದಯ ಮತ್ತು ಸೂರ್ಯಾಸ್ತ ಎಷ್ಟು ಗಂಟೆಗ ಘಟಿಸುತ್ತವೆ ಎಂಬುದನ್ನು ನಮೂದಿಸಿರುತ್ತಾರೆ. ಅದರ ನೆರವಿನಿಂದ ಪ್ರತೀದಿನ ಬೆಳಗ್ಗೆ ಸೂರ್ಯೋದಕ್ಕೆ ಮುನ್ನ ಏಳಿ. ಸೂರ್ಯೋದಯ ವೀಕ್ಷಣೆಗೆಂದು ನಿಗದಿ ಪಡಿಸಿದ ಸ್ಥಳದಲ್ಲಿ ಆ ಸ್ಥಳ ಮತ್ತು ಪೂರ್ವ ದಿಗ್ಬಿಂದುಗಳನ್ನು ಜೋಡಿಸುವ ಕಾಲ್ಪನಿಕ ನೇರರೇಖೆಯ ಮೇಲೆ ಒಂದು ಕಡ್ಡಿಯನ್ನು ಅದರ ಒಂದು ತುದಿ ನಿರ್ಧಾರಿತ ಸ್ಥಳವನ್ನು ಸ್ಪರ್ಷಿಸುವಂತೆ ಇಡಿ. ಸೂರ್ಯೋದಯವಾಗುವಾಗ ವೀಕ್ಷಣಾ ಸ್ಥಳ ಮತ್ತು ಕ್ಷಿತಿಜದಲ್ಲಿ ಸೂರ್ಯೋದಯವಾಗುತ್ತಿರುವ ಬಿಂದುಗಳನ್ನು ಜೋಡಿಸುವ ಕಾಲ್ಪನಿಕ ನೇರರೇಖೆಯ ಮೇಲೆ ಇನ್ನೊಂದು ಕಡ್ಡಿಯನ್ನು ಅದರ ಒಂದು ತುದಿ ನಿರ್ಧಾರಿತ ಸ್ಥಳವನ್ನು ಸ್ಪರ್ಷಿಸುವಂತೆ ಇಡಿ (ಚಿತ್ರ ೩).

ತದನಂತರ ಈ ಎರಡು ಕಡ್ಡಿಗಳ ನಡುವಿನ ಕೋನವನ್ನು ಕೋನಮಾಪಕದ ನೆರವಿನಿಂದ ಅಳತೆ ಮಾಡಿ ಗುರುತಿಸಿಕೊಳ್ಳಿ. ಈ ಮುನ್ನವೇ ನೀವು ಸಿದ್ಧಪಡಿಸಿದ್ದ ನಕಾಶೆಯಲ್ಲಿ ಈ ಅಳತೆಯ ನೆರವಿನಿಂದ ಕ್ಷಿತಿಜದಲ್ಲಿ ಸೂರ್ಯೋದಯವಾದ ಬಿಂದುವನ್ನು ಗುರುತಿಸಿ (ಚಿತ್ರ ೪). ಆ ದಿನದ ದಿನಾಂಕವನ್ನೂ, ಸೂರ್ಯೋದಯದ ಮತ್ತು ಸೂರ್ಯಾಸ್ತದ ಗಂಟೆಗಳನ್ನೂ ಬರೆದಿಡಿ.

ಈ ಪ್ರಕ್ರಿಯೆಯನ್ನು ಒಂದು ವರ್ಷ ಕಾಲ ಮಾಡಿದರೆ ಈ ಕೆಳಗಿನ ತಥ್ಯಗಳನ್ನು ನೀವು ಗ್ರಹಿಸುವಿರಿ.

೧. ಕ್ಷಿತಿಜದ ಮೇಲಿನ ಒಂದೇ ಬಿಂದುವಿನಲ್ಲಿ ಸೂರ್ಯ ಪ್ರತೀದಿನ ಪೂರ್ವ ದಿಗ್ಬಿಂದುವಿನಲ್ಲಿ ಉದಯಿಸುವುದಿಲ್ಲ. ಸೂರ್ಯೋದಯದ ಬಿಂದು ಚಿತ್ರ ೪ ರಲ್ಲಿ ಕೆಂಪು ಬಾಣದ ಗುರುತಿನಿಂದ ಸೂಚಿಸಿದಂತೆ ಉತ್ತರದಿಂದ ದಕ್ಷಿಣಕ್ಕೆ ಅಥವ ನೀಲಿ ಬಾಣದ ಗುರುತಿನಿಂದ ಸೂಚಿಸದಂತೆ ದಕ್ಷಿಣದಿಂದ ಉತ್ತರಕ್ಕೆ ನಿಧಾನವಾಗಿ ಸರಿಯುತ್ತಿರುವುದನ್ನು ನೀವು ಗಮನಿಸುತ್ತೀರಿ, ಸರಿಯುತ್ತಿರುವ ದಿಕ್ಕು ನೀವು ಸೂರ್ಯೋದಯ ವೀಕ್ಷಿಸುತ್ತಿರುವ ತಿಂಗಳನ್ನು ಅವಲಂಬಿಸಿರುತ್ತದೆ.

೨. ನೀವು ವೀಕ್ಷಿಸಲು ಆರಂಭಿಸಿದ ನಂತರದ ದಿನಗಳಲ್ಲಿ ಸೂರ್ಯೋದಯದ ಬಿಂದು ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತಿದ್ದರೆ ಕ್ಷಿತಿಜದ ಪೂರ್ವ ಮತ್ತು ದಕ್ಷಿಣ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ದಿಕ್ಕು ಬದಲಿಸಿ ಉತ್ತರಾಭಿಮುಖವಾಗಿ ಸರಿಯಲಾರಂಭಿಸುತ್ತದೆ. ನೀವು ವೀಕ್ಷಿಸಲು ಆರಂಭಿಸಿದ ನಂತರದ ದಿನಗಳಲ್ಲಿ ಸೂರ್ಯೋದಯದ ಬಿಂದು ದಕ್ಷಿಣದಿಂದ ಉತ್ತರಕ್ಕೆ ಸರಿಯುತ್ತಿದ್ದರೆ ಕ್ಷಿತಿಜದ ಪೂರ್ವ ಮತ್ತು ಉತ್ತರ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ದಿಕ್ಕು ಬದಲಿಸಿ ದಕ್ಷಿಣಾಭಿಮುಖವಾಗಿ ಸರಿಯಲಾರಂಭಿಸುತ್ತದೆ. ಸೂರ್ಯೋದಯದ ಬಿಂದು ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತಿರುವ ಅವಧಿಯೇ ದಕ್ಷಿಣಾಯನ, ದಕ್ಷಿಣದಿಂದ ಉತ್ತರಕ್ಕೆ ಸರಿಯುತ್ತಿರುವ ಅವಧಿಯೇ ಉತ್ತರಾಯಣ.

೩.  ದಕ್ಷಿಣಾಯನದ ಅವಧಿಯಲ್ಲಿ ನಿಧಾನವಾಗಿ ಹಗಲಿನ ಅವಧಿ ಕಮ್ಮಿ ಆಗುತ್ತಿರುತ್ತದೆ, ರಾತ್ರಿಯ ಅವಧಿ ಹೆಚ್ಚು ಆಗುತ್ತಿರುತ್ತದೆ. ಉತ್ತರಾಯಣದ ಅವಧಿಯಲ್ಲಿ ನಿಧಾನವಾಗಿ ಹಗಲಿನ ಅವಧಿ ಹೆಚ್ಚು ಆಗುತ್ತಿರುತ್ತದೆ, ರಾತ್ರಿಯ ಅವಧಿ ಕಮ್ಮಿ ಆಗುತ್ತಿರುತ್ತದೆ.

೪. ಉತ್ತರಾಯಣದ ಅವಧಿಯಲ್ಲಿ ಒಂದು ದಿನ, ದಕ್ಷಿಣಾಯನದ ಅವಧಿಯಲ್ಲಿ ಒಂದು ದಿನ – ಇಂತು ವರ್ಷದಲ್ಲಿ ಎರಡು ದಿನ ಮಾತ್ರ ಸೂರ್ಯ ಪೂರ್ವ ದಿಗ್ಬಿಂದುವಿನಲ್ಲಿ ಉದಯಿಸಿ ಪಶ್ಚಿಮ ದಿಗ್ಬಿಂದುವಿನಲ್ಲಿ ಅಸ್ತಮಿಸುತ್ತದೆ. ಆ ಎರಡು ದಿನಗಳಲ್ಲಿ ಮಾತ್ರ ಹಗಲು ಮತ್ತು ರಾತ್ರಿಯ ಅವಧಿಗಳು ಸಮವಾಗಿರುತ್ತವೆ. ಉತ್ತರಾಯಣದಲ್ಲಿ ಇರುವ ಇಂಥ ದಿನಕ್ಕೆ ವಸಂತ ವಿಷುವ (ಸ್ಪ್ರಿಂಗ್ ಈಕ್ವಿನಾಕ್ಸ್) ಎಂದೂ ದಕ್ಷಿಣಾಯನದ್ದಕ್ಕೆ ಶರದ್ವಿಷುವ (ಆಟಮ್ ಈಕ್ವಿನಾಕ್ಸ್) ಎಂದೂ ಹೆಸರು.

೫. ದಕ್ಷಿಣಾಯನದ ಅಂತ್ಯದಲ್ಲಿ ಕ್ಷಿತಿಜದ ಪೂರ್ವ ಮತ್ತು ದಕ್ಷಿಣ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ಸೂರ್ಯೋದಯದ ಬಿಂದು ದಿಕ್ಕು ಬದಲಿಸಿ ಉತ್ತರಾಭಿಮುಖವಾಗಿ ಸರಿಯಲಾರಂಭಿಸುತ್ತದೆ ಎಂದೂ ಈ ಹಿಂದೆಯೇ ಹೇಳಿದೆಯಷ್ಟೆ. ಉತ್ತರಾಯಣದ ಅಂತ್ಯದಲ್ಲಿ ಕ್ಷಿತಿಜದ ಪೂರ್ವ ಮತ್ತು ಉತ್ತರ ದಿಗ್ಬಿಂದುಗಳ ನಡುವಿನ ಪರಿಧಿಯಲ್ಲಿ ಒಂದು ನಿರ್ದಿಷ್ಟ ದೂರ ಸರಿದು ತದನಂತರ ಸೂರ್ಯೋದಯದ ಬಿಂದು ದಿಕ್ಕು ಬದಲಿಸಿ ದಕ್ಷಿಣಾಭಿಮುಖವಾಗಿ ಸರಿಯಲಾರಂಭಿಸುತ್ತದೆ ಎಂದೂ ಈ ಹಿಂದೆಯೇ ಹೇಳಿದೆಯಷ್ಟೆ. ಹೀಗೆ ದಿಶಾವ್ಯತ್ಯಯವಾಗುವ ಎರಡು ಬಿಂದುಗಳಿಗೆ ಆಯನ ಬಿಂದುಗಳು (ಸಾಲ್ ಸ್ಟಿಸ್ ಪಾಇಂಟ್ಸ್) ಎಂದು ಹೆಸರು. ಉತ್ತರಾಯಣದ ಅಂತ್ಯದಲ್ಲಿರುವ ಅಯನ ಬಿಂದುವಿನಲ್ಲಿ ಸೂರ್ಯೋದಯವಾದಂದು ಅತೀ ದೀರ್ಘಾವಧಿಯ ಹಗಲೂ ಅತೀ ಹ್ರಸ್ವಾವಧಿಯ ರಾತ್ರಿಯೂ ಇರುತ್ತದೆ, ದಕ್ಷಿಣಾಯನದ ಅಂತ್ಯದಲ್ಲಿರುವ ಅಯನ ಬಿಂದುವಿನಲ್ಲಿ ಸೂರ್ಯೋದಯವಾದಂದು ಅತೀ ದೀರ್ಘಾವಧಿಯ ರಾತ್ರಿಯೂ ಅತೀ ಹ್ರಸ್ವಾವಧಿಯ ಹಗಲೂ ಇರುತ್ತದೆ,

ವೀಕ್ಷಣೆಯಿಂದ ನೀವೇ ಪತ್ತೆಹಚ್ಚಬೇಕಾದ ದಿನಾಂಕಗಳು:

ಉತ್ತರಾಯಣ ಆರಂಭ, ದಕ್ಷಿಣಾಯನ ಆರಂಭ, ವಸಂತ ವಿಷುವ, ಶರದ್ವಿಷುವ. (ಸುಳಿವು- ಇವು ಅನುಕ್ರಮವಾಗಿ ಡಿಸೆಂಬರ್, ಜೂನ್, ಮಾರ್ಚ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಘಟಿಸುತ್ತವೆ)

ಅಂದ ಹಾಗೆ ಉತ್ತರಾಯಣ ಪುಣ್ಯಕಾಲಾರಂಭವಾಗುವುದು ಮಕರ ಸಂಕ್ರಾಂತಿಯಂದು ಅಲ್ಲ ಎಂಬ ಸತ್ಯವನ್ನು ನೀವೇ ಆವಿಷ್ಕರಿಸುವಿರಿ.

[ಈ ಚಟುವಟಿಕೆಯನ್ನು ಯಶಸ್ವಿಯಾಗಿ ಪೂರೈಸುವವರು ಕನಿಷ್ಠಪಕ್ಷ ಹವ್ಯಾಸೀ ಖಗೋಲವಿಜ್ಞಾನಿಗಳಾಗುವ ಗುರಿ ಇಟ್ಟುಕೊಂಡು ಯುಕ್ತ ಅಧ್ಯಯನಗಳನ್ನು ಮಾಡಲಾರಂಭಿಸಿ]

Posted in ವಿಜ್ಞಾನ - ಮಾಡಿ ಕಲಿ | Tagged , , , , | Leave a comment

ಪ್ರಜಾಪ್ರಭುತ್ವದ ಶಿಕ್ಷಣ

ಪ್ರಜಾಪ್ರಭುತ್ವ ಒಂದು ಸುಂದರ ಪರಿಕಲ್ಪನೆ ಎಂಬುದರ ಕುರಿತಾಗಲಿ, ನಮಗೆ ತಿಳಿದಿರುವ ಪ್ರಭುತ್ವದ ನಮೂನೆಗಳ ಪೈಕಿ ಅತ್ಯಂತ ಶ್ರೇಷ್ಠವಾದದ್ದು ಎಂಬುದರ ಕುರಿತಾಗಲಿ ಯಾವ ಸಂಶಯವೂ ನನಗಿಲ್ಲವಾದರೂ ನಮಗೆ, ಅರ್ಥಾತ್ ಈ ಕರ್ಮಭೂಮಿಯ ಪ್ರಜೆಗಳಿಗೆ ಪ್ರಜಾಪ್ರಭುತ್ವ ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಅರ್ಹತೆ ಇದೆಯೇ ಎಂಬುದರ ಕುರಿತು ಸಂಶಯ ಇದೆ. ನನಗೆ ತಿಳಿದ ಮಟ್ಟಿಗೆ ಪ್ರಜಾಪ್ರಭುತ್ವದ ಯಶಸ್ಸು ಪ್ರಜೆಗಳ, ಅರ್ಥಾತ್  ಮತದಾರನ ವಿವೇಕವನ್ನು ಆಧರಿಸಿರುತ್ತದೆ.

  • ಹಣ, ಹೆಂಡ. ಸೀರೆ ಮೊದಲಾದವನ್ನು ಧಾರಾಳವಾಗಿ ಕೊಡುವವರನ್ನೇ ಆಗಲಿ ಚುನಾವಾಣೆಯಲ್ಲಿ ಗೆದ್ದು ಬಂದರೆ ಉಚಿತವಾಗಿ ‘ಕಲರ್’ಟಿವಿ,’ಮಿಕ್ಸಿ’ ನಗಣ್ಯ ಅನ್ನಬಹುದಾದಷ್ಟು ಕಡಿಮೆ ಬಡ್ಡಿಯ ಸಾಲ ಮುಂತಾದವನ್ನು ಕೊಡುವುದಾಗಿ ಭರವಸೆ ನೀಡುವ ಮಂದಿಯನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಮ್ಮ ಮತದವ, ನಮ್ಮ ಜಾತಿಯವ, ನಮ್ಮ ಊರಿನವ ಎಂಬ ಕಾರಣಕ್ಕಾಗಿ ನಾಯಕನನ್ನು ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ತನ್ನ ಕ್ಷೇತ್ರವನ್ನು ಚುನಾವಣಾ ಸಮಯದಲ್ಲಿ ಮಾತ್ರ ಜ್ಞಾಪಿಸಿಕೊಳ್ಳುವ ವ್ಯಕ್ತಿಯನ್ನು ಪುನಃ ಪುನಃ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ನಾವು ಆಯ್ಕೆ ಮಾಡಿದವ ನಿಶ್ಚಿತ ಆದಾಯದ ಮೂಲಗಳು ಇಲ್ಲದೇ ಇದ್ದಾಗ್ಯೂ ನಿಗೂಢ ರೀತಿಯಲ್ಲಿ ಅತ್ಯಲ್ಪ ಅವಧಿಯಲ್ಲಿ ಕೋಟ್ಯಾಧಿಪತಿ ಆಗುವುದಷ್ಟೇ ಅಲ್ಲ ಆತನ ನಿಕಟ ಸಂಬಂಧಿಗಳು, ಅನುಯಾಯಿಗಳು ಮುಂತಾದವರೂ ನಾವು ನೋಡುತ್ತಿದ್ದಂತೆಯೇ ಅತ್ಯಲ್ಪ ಅವಧಿಯಲ್ಲಿ ಸಿರಿವಂತರಾಗುವ ಪವಾಡವನ್ನು ನೋಡಿಯೂ ಪುನಃ ಆತನನ್ನೇ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ಗೂಂಡಾಗಳನ್ನೂ ಕಳವು ಕೊಲೆ ದರೋಡೆ ಮುಂತಾದವನ್ನು ಸಿಕ್ಕಿಹಾಕಿಕೊಳ್ಳದೇ ಮಾಡುವಷ್ಟು ಚಾಣಾಕ್ಷರಾದವರನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವ ನಾವು ವಿವೇಕಿಗಳೇ? ಜನಪ್ರತಿನಿಧಿ ಸ್ವಜನಪ್ರತಿನಿಧಿಯಾಗುವದನ್ನು ನೋಡಿಯೂ ಪುನಃ ಅವನನ್ನೇ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ವಿಧಾನ/ಲೋಕ ಸಭೆಗಳಲ್ಲಿ ನಾವು ಆಯ್ಕೆ ಮಾಡಿದವ ಇನ್ನೊಂದು ಪಕ್ಷದವರ ಹುಳುಕುಗಳನ್ನು ಹುಡುಕುವುದೇ ತಮ್ಮ ಪರಮ ಕರ್ತವ್ಯ ಎಂಬಂತೆ ವರ್ತಿಸುವುದನ್ನೂ ಚರ್ಚೆಯ ಹೆಸರಿನಲ್ಲಿ ವೈಯಕ್ತಿಕ ನಿಂದೆ ಅಥವ ಪರಸ್ಪರ ದೋಷಾರೋಪಣೆ (ಕೆಲವೊಮ್ಮೆ ದೈಹಿಕವಾಗಿ ಹೊಡೆದಾಡುವುದರಲ್ಲಿ) ಮಾಡುವುದರಲ್ಲಿಯೇ ಕಾಲಕಳೆಯುವುದನ್ನೂ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗದ್ದಲವೆಬ್ಬಿಸಿ ಕಾರ್ಯಕಲಾಪ ನಡೆಯದಂತೆ (ಕೆಲವೊಮ್ಮೆ ದಿನಗಟ್ಟಲೆ ಕಾಲ) ಮಾಡುವುದನ್ನೂ ಎಷ್ಟೋ ವಿಧೇಯಕಗಳನ್ನು ಯಾವ ಚರ್ಚೆಯೂ ಇಲ್ಲದೇ ಅಂಗೀಕರಿಸುವುದನ್ನೂ ನೋಡಿಯೂ ಅವರನ್ನೇ ಪುನಃ ಆಯ್ಕೆ ಮಾಡುವ ನಾವು ವಿವೇಕಿಗಳೇ?
  • ‘ಜನಪ್ರತಿನಿಧಿ’ ಎಂಬ ಹಣೆಪಟ್ಟಿ ಹಾಕಿಕೊಂಡಿದ್ದರೂ ‘ಜನ’ ಆತನನ್ನು ಭೇಟಿ ಮಾಡಬೇಕಾದರೆ ‘ಭಗೀರಥ ಪ್ರಯತ್ನ’ ಮಾಡಬೇಕಾದ ಪರಿಸ್ಥಿತಿ ಏಕೆ?

ನನಗೆ ತಿಳಿದ ಮಟ್ಟಿಗೆ ನಮ್ಮ ‘ಪ್ರತಿನಿಧಿ’ಯನ್ನು ಆಯ್ಕೆ ಮಾಡುವುದರೊಂದಿಗೆ ಪ್ರಜಾಪ್ರಭುತ್ವದಲ್ಲಿ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಆ ‘ಪ್ರತಿನಿಧಿ’ಗೆ ನಮ್ಮ, ಅರ್ಥಾತ್ ‘ಜನಾಭಿಪ್ರಾಯ’ವನ್ನು ತಿಳಿಸುವ ವ್ಯವಸ್ಥೆ, ‘ಜನಾಭಿಪ್ರಾಯಕ್ಕೆ’ ‘ಜನಪ್ರತಿನಿಧಿ’ ಮನ್ನಣೆ ನೀಡಲೇ ಬೇಕಾದಂತೆ ಮಾಡುವ ವ್ಯವಸ್ಥೆಯೂ ಇರಬೇಕು. ನಮ್ಮ ದೇಶದಲ್ಲಿ ಇದಕ್ಕೆಂದೇ ಸ್ಥಾಪಿತವಾಗಿರುವ ಗ್ರಾಮ ಸಭೆ, ಗ್ರಾಮಪಂಚಾಯತ್ ಇವೇ ಮೊದಲಾದ ಅನೇಕ ಸಂಸ್ಥೆಗಳು ‘ಜನರ ಅವಿವೇಕ’ದಿಂದಾಗಿ ಪ್ರಜಾಪ್ರಭುತ್ವವನ್ನು ಅಣಕಿಸುವ ಪ್ರಹಸನ ಪ್ರದರ್ಶಿಸುವ ಸಂಸ್ಥೆಗಳಾಗಿವೆ. ಕೆಲವೊಮ್ಮೆ ‘ಬಹುಮತ’ದ ಮುಖೇನ ಅಭಿವ್ಯಕ್ತಿಗೊಳ್ಳುವ ಬಹುಜನಾಭಿಪ್ರಾಯ (ನಮ್ಮ ದೇಶದಲ್ಲಿ ಆಗುತ್ತಿರುವಂತೆ) ಯುಕ್ತವಾದದ್ದು ಆಗಿಲ್ಲದಿರುವ ಸಾಧ್ಯತೆಯೂ ಇದೆ. ಯುಕ್ತ ಶಿಕ್ಷಣದ ಕೊರತೆ, ದೂರದರ್ಶಿತ್ವ ಇಲ್ಲದ (ರಾಜಕೀಯ, ಮತೀಯ ಮುಂತಾದ) ನಾಯಕರ ಕೊರತೆ ಇದ್ದಾಗ ಈ ಸ್ಥಿತಿ ಸೃಷ್ಟಿಯಾಗುತ್ತದೆ ಎಂಬುದು ನನ್ನ ನಿಲುವು.

ನನಗೆ ತಿಳಿದ ಮಟ್ಟಿಗೆ ‘ಪ್ರಜಾಪ್ರಭುತ್ವ’ದ ಪರಿಕಲ್ಪನೆ ನಮಗೆ, ಅರ್ಥಾತ್ ಈ ಕರ್ಮಭೂಮಿ/ಧರ್ಮಭೂಮಿಯ ವಾಸಿಗಳಿಗೆ ಸಂಪೂರ್ಣ ಅಪರಿಚಿತವಾದದ್ದು. ನಮ್ಮ ಇತಿಹಾಸ ಪುರಾಣಗಳನ್ನು ಅವಲೋಕಿಸಿ. ಪ್ರಜಾಹಿತೈಷಿಯೋ ಪ್ರಜಾಪೀಡಕನೋ – ಯಾರೋ ಒಬ್ಬರ ಆಳ್ವಿಕೆಯಲ್ಲಿ ಬದುಕುವುದು ಮಾತ್ರ ನಮಗೆ ಗೊತ್ತು, ಅದೇ ನಮ್ಮ ಪರಂಪರೆ. ‘ಅಪ್ಪಣೆ ಮಹಾಪ್ರಭು’ ಸಂಸ್ಕೃತಿಯವರು ನಾವು. ‘ಮನೆಯಲ್ಲಿ ಮನೆಯ ಯಜಮಾನನ ತೀರ್ಮಾನವೇ (ಅದು ಏನೇ ಆಗಿರಲಿ) ಅಂತಿಮ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ’ ಸಂಪ್ರದಾಯದವರು ನಾವು. ಇಂದು ‘ಪ್ರಜಾಪ್ರಭುತ್ವ’ದ ಹೆಸರಿನಲ್ಲಿ  ಈ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದೇವೆ. ‘ಮುಕ್ತಚರ್ಚೆ’ಯ ಹೆಸರಿನಲ್ಲಿ ಗಂಟೆಗಟ್ಟಲೆ’ಚರ್ಚೆ’ ಮಾಡಿ ‘ಇಲ್ಲಿ ನಡೆದ ಚರ್ಚೆಯನ್ನು ಆಧರಿಸಿ ಅಂತಿಮ ನಿರ್ಣಯವನ್ನು ಸಿದ್ಧಪಡಿಸಿ ಸಂಬಂಧಿಸಿದವರಿಗೆ ರವಾನಿಸುವ ಅಧಿಕಾರವನ್ನು ಹಿರಿಯರಾದ ನಿಮಗೇ ಕೊಟ್ಟಿದ್ದೇವೆ, ತೀರ್ಮಾನವನ್ನು ವರಿಷ್ಠರಿಗೆ ಬಿಟ್ಟಿದ್ದೇವೆ. ಹಿರಿಯರು ಹೇಗೆ ಹೇಳುತ್ತಾರೋ ಹಾಗೆ, ತಜ್ಞರ ಸಮಿತಿಯ ತೀರ್ಮಾನಕ್ಕೆ ನಾವು ಬದ್ಧ’ ಇವೇ ಮುಂತಾದ ಹೇಳಿಕೆಗಳ ಧ್ವನಿತಾರ್ಥ ‘ನಮ್ಮನ್ನು ನಾವು ಆಳಿಕೊಳ್ಳಲಾರೆವು, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಅಸಮರ್ಥರು’ ಎಂದೇ ನನ್ನ ಅಭಿಪ್ರಾಯ. ಬಹುಶಃ ಆತ್ಮವಂಚನೆ ಮಾಡಿಕೊಳ್ಳುವುದರಲ್ಲಿ ನಾವು ನಿಸ್ಸೀಮರೋ ಏನೋ?  ಇದಕ್ಕೆ ಇನ್ನೂ ಒಂದು ಉದಾಹರಣೆ ಕೊಡುತ್ತೇನೆ. ಕೆಲವು ಸಂದರ್ಭಗಳಲ್ಲಿ ಸರ್ಕಾರ ಯಾವುದೋ ಒಂದು ‘ನೀತಿ’ ರೂಪಿಸಿ ಅದನ್ನು ಜನತೆಯ ಮುಂದಿಟ್ಟು ದೇಶದಾದ್ಯಂತ ಅದರ ಸಾಧಕಬಾಧಕಗಳ ಕುರಿತಾದ ‘ಚರ್ಚೆ’ಗೆ ‘ಮುಕ್ತ’ ಅವಕಾಶ ಒದಗಿಸುವುದುಂಟು. ಈ ಮುಖೇನ ಜನಾಭಿಪ್ರಾಯ ಸಂಗ್ರಹಿಸಿದ ಬಳಿಕವೇ ‘ನೀತಿ’ಗೆ ಅಂತಿಮ ರೂಪು ಕೊಡುವುದಾಗಿಯೂ ಘೋಷಿಸಿರುತ್ತದೆ. ಇಂಥ ‘ಮುಕ್ತಚರ್ಚೆ’ಯನ್ನು ಸಂಘಟಿಸುವ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರೀ ಇಲಾಖೆಯ ಅಧಿಕಾರಿಗಳಿಗೆ, ‘ಸರ್ಕಾರೀ ಮಾನ್ಯತೆ ಪಡೆದ ಸರ್ಕಾರೀ ಅನುದಾನ ಕೃಪಾಪೋಷಿತ ವಿಶ್ವಾಸಾರ್ಹ (ಯಾರಿಗೆ ಎಂದು ಕೇಳಬೇಡಿ) ಸ್ವಯಂಸೇವಾ ಸಂಘಟನೆಗಳಿಗೆ’ ಸರ್ಕಾರ ವಹಿಸಿರುತ್ತದೆ. ಇಂಥ ‘ಮುಕ್ತ ಚರ್ಚಾಗೋಷ್ಠಿ’ಗಳಲ್ಲಿ ಸರ್ಕಾರ ಅಪಾರ ಗೌರವ ಇಟ್ಟಿರುವ ‘ತಜ್ಞ’ರು (ಅರ್ಥಾತ್, ಸರ್ಕಾರದ ಮನದ ಇಂಗಿತವನ್ನು ಅರಿತು ಅದನ್ನು ಜನತೆ ಅಂಗೀಕರಿಸುವಂತೆ ಮಾಡಬಲ್ಲವರು) ಮತ್ತು ‘ಆಹ್ವಾನಿತ’ ಆಸಕ್ತರು ಪ್ರಮುಖ ಪಾತ್ರವಹಿಸುತ್ತಾರೆ. ‘ನೀತಿ’ಯ ಕ್ಷುಲ್ಲಕ ಅಂಶಗಳಲ್ಲಿ ತುಸು ಬದಲಾವಣೆ ಸೂಚಿಸಿ ಕೆಲವು ಅನುಷ್ಠಾನಗೊಳಿಸಲಾಗದ ಸಲಹೆಗಳನ್ನೂ ಸೇರಿಸಿ ಪ್ರಮುಖ ಅಂಶವನ್ನು ಯಥಾವತ್ತಾಗಿ ‘ಸಭೆ’ ಅವಿರೋಧವಾಗಿ ಒಪ್ಪುವಂತೆ ಮಾಡಬಲ್ಲ ಚತುರರು ಇವರಾಗಿರುತ್ತಾರೆ. ದೇಶದಾದ್ಯಂತ ನಡೆದ ಇಂಥ ಚರ್ಚಾಗೋಷ್ಠಿಗಳಿಂದ ಸಂಗ್ರಹಿಸಿದ ‘ಜನಾಭಿಪ್ರಾಯ’ವನ್ನು ಗಮನದಲ್ಲಿ ಇರಿಸಿಕೊಂಡು ಅಂತಿಮ ‘ನೀತಿ’ಯನ್ನು ರೂಪಿಸುವ ಪ್ರಹಸನವೂ ಬಲು ಯಶಸ್ವಿಯಾಗಿ ಜರಗುತ್ತದೆ. ಇದನ್ನೆಲ್ಲ ನೋಡಿದ ನಂತರ ನಾವು ಈಗಿರುವ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ನಮ್ಮ ಜಾಯಮಾನಕ್ಕೆ ಒಗ್ಗುವಂಥದ್ದಲ್ಲ ಎಂದು ನನಗೆ ಅನ್ನಿಸತೊಡಗಿದೆ.

ಆದರೂ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಡಬಾರದು ಅನ್ನುವವನು ನಾನು. ಅದನ್ನು ಯಶಸ್ವಿಗೊಳಿಸಲು ಕೆಲವು ಕ್ಷಿಪ್ರ ಫಲದಾಯಕ ತಂತ್ರಗಳನ್ನು (ಯುಕ್ತ ಕಾನೂನು ರೂಪಣೆ, ಯುಕ್ತ ಜಾಹೀರಾತುಗಳ ಸುರಿಮಳೆ ಇತ್ಯಾದಿ) ಮತ್ತು ಸುದೀರ್ಘ ಕಾಲಾನಂತರ ಫಲ ನೀಡುವ ‘ಶಿಕ್ಷಣ’ ಎಂಬ ಪ್ರಬಲ ಅಸ್ತ್ರವನ್ನು ಉಪಯೋಗಿಸ ಬೇಕು ಎಂಬುದು ನನ್ನ ಅಭಿಮತ.

‘ಪ್ರಜಾಪ್ರಭುತ್ವ ವ್ಯವಸ್ಥೆಯ ಬಲ ಸಂವರ್ಧನೆಗಾಗಿ ನೀಡುವ ಶಿಕ್ಷಣ’ವು ಸೈದ್ಧಾಂತಿಕ ತಳಹದಿಯ ಮೇಲೆ ರೂಪಿಸಿದ ಪ್ರಾಯೋಗಿಕ ಶಿಕ್ಷಣವಾಗಿರಬೇಕೇ ವಿನಾ ಪ್ರಜಾಪ್ರಭುತ್ವದ ಅರ್ಥ, ಲಕ್ಷಣಗಳು, ಪ್ರಜೆಗಳ ಮತ್ತು ಪ್ರಜಾಪ್ರತಿನಿಧಿಗಳ ಹಕ್ಕುಬಾಧ್ಯತೆಗಳ ಮಾಹಿತಿ ಒದಗಿಸುವ ಸೈದ್ಧಾಂತಿಕ ಶಿಕ್ಷಣ ಆಗಿರಕೂಡದು (ಈಗ ಇದೂ ಸಮರ್ಪಕವಾಗಿ ಆಗುತ್ತಿಲ್ಲ ‘ಜನರಿಂದ ಜನರಿಗಾಗಿ ಜನರ ಸರ್ಕಾರವೇ–‘ಉಕ್ತಿಯನ್ನು ಕಂಠಸ್ಥ ಮಾಡುವುದು ಶಿಕ್ಷಣವಲ್ಲ). ಈ ಶಿಕ್ಷಣ ಪ್ರಾಥಮಿಕ ಹಂತದಿಂದಲೇ ಆರಂಭವಾಗ ಬೇಕು., ಪ್ರತಿನಿಧಿಗಳಾಗ ಬಯಸುವವರು ಪ್ರಚಾರ ಮಾಡಬೇಕಾದದ್ದು ಹೇಗೆ, ಇವರ ಪೈಕಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡವೇನು, ಚುನಾವಣಾ ಪ್ರಕ್ರಿಯೆ ಜರಗುವ ವಿಧಾನ, ಅಭ್ಯರ್ಥಿಗಳು ಸೋಲುಗೆಲುವುಗಳನ್ನು ಸ್ವೀಕರಿಸ ಬೇಕಾದ ರೀತಿ, ಗೆದ್ದ ಅಭ್ಯರ್ಥಿಯ ಕರ್ತವ್ಯಗಳು, ಅನರ್ಹರನ್ನು ಆಯ್ಕೆ ಮಾಡಿದರೆ ಆಗುವ ದುಷ್ಪರಿಣಾಮಗಳು, ಚರ್ಚೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಭಾವೋದ್ವೇಗಕ್ಕೆ ಒಳಗಾಗದೇ ಇತರರನ್ನು ಹೀಗಳೆಯದೇ ಮಂಡಿಸುವುದು ಹೇಗೆ, ಮಂಡನೆಯಾದ ಅಭಿಪ್ರಾಯಗಳ ಸಾಧಕಬಾಧಕಗಳನ್ನು ವಿಷಯನಿಷ್ಠವಾಗಿ ವಿಮರ್ಶಿಸುವುದು ಹೇಗೆ ಇವೇ ಮೊದಲಾದ ಸುಸಂಗತ ಅಂಶಗಳಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಅನುಭವ ಮತ್ತು ಸೈದ್ಧಾಂತಿಕ ಚರ್ಚೆಗಳ ಹಿತಮಿತವಾದ ಮಿಶ್ರಣ ಈ ಶಿಕ್ಷಣ ಆಗಿರಬೇಕು. ಈಗ ಕೆಲವು ಶಾಲೆಗಳಲ್ಲಿ ಶಾಲಾ ಸರ್ಕಾರ ಎಂಬ ಚಟುವಟಿಕೆಯ ಮುಖೇನ, ಕೆಲವು ಶಾಲೆಗಳಲ್ಲಿ ಶಾಲಾ ನಾಯಕ ಹಾಗೂ ತರಗತಿ ನಾಯಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದರ ಮುಖೇನ ಪ್ರಜಾಪ್ರಭುತ್ವದ ಅನುಭವ ಒದಗಿಸುವ ಪ್ರಯತ್ನಗಳು ಆಗುತ್ತಿವೆ. ಪ್ರತಿನಿಧಿಯನ್ನು ಆಯ್ಕೆ ಮಾಡುವುದಷ್ಟೇ ನಮ್ಮ ಜವಾಬ್ದಾರಿ ಎಂಬ ಮನೋಧರ್ಮ ಬೆಳೆಯಲು ಇದೇ ಕಾರಣ ಎಂಬ ಗುಮಾನಿ ನನ್ನದು. ಶಿಕ್ಷಕರ ಗೈರುಹಾಜರಿಯಲ್ಲಿ ತರಗತಿಯ ಶಿಸ್ತು ಕಾಯ್ದುಕೊಳ್ಳುವುದು, ಶಿಸ್ತು ಉಲ್ಲಂಘಿಸದವರು ಯಾರೆಂಬುದನ್ನು ಶಿಕ್ಷಕರಿಗೆ ತಿಳಿಸುವುದು, ಈ ಶಾಲೆಗಳಲ್ಲಿ ಶಿಕ್ಷಕರ ಆಜ್ಞಾನುಸಾರ ಶಾಲಾ ಸಮಾರಂಭಗಳನ್ನು ಸಂಘಟಿಸುವುದು ಮುಂತಾದವು ಪ್ರಜಾಪ್ರಭುತ್ವ ರೀತಿಯ ಚುನಾವಣೆಯ ಮುಖೇನ ಆಯ್ಕೆ ಆದವರ ಪ್ರಮುಖ ಕರ್ತವ್ಯಗಳಾಗಿವೆ. ಯಾವುದೇ ಸಂದರ್ಭದಲ್ಲಿ ಅಭಿಪ್ರಾಯ ಸಂಗ್ರಹಣೆ, ಒಗ್ಗೂಡಿ ತೀರ್ಮಾನಿಸುವಿಕೆ ಮುಂತಾದ ಪ್ರಜಾಪ್ರಭುತ್ವದ ಯಶಸ್ಸಿಗೆ ಅತ್ಯಾವಶ್ಯಕವಾದ ಕುಶಲತೆಗಳ ಅನುಭವ ಇವರಿಗೆ ಆಗುವುದೇ ಇಲ್ಲ. ಸ್ವಯಂಆಡಳಿತ ಅಂದರೆ ಸ್ವೇಚ್ಛಾಚರದ ಆಡಳಿತ ಅಲ್ಲ ಎಂಬ ಅರಿವು ಮೂಡಿಸುವ ಪ್ರಯತ್ನಗಳೇ ಆಗಿಲ್ಲ. ಅಂದ ಮೇಲೆ, ಇವರು ಬೆಳೆದು ಪ್ರೌಢರಾದ ಬಳಿಕ ಪ್ರಜಾಪ್ರಭುತ್ವದಲ್ಲಿ ಜವಾಬ್ದಾರೀಯುತವಾಗಿ ಪಾಲ್ಗೊಳ್ಳುವುದು ಹೇಗೆ ಸಾಧ್ಯ?

ಪ್ರಜಾಪ್ರಭುತ್ವದಲ್ಲಿ ಜವಾಬ್ದಾರೀಯುತ ಪ್ರಜೆಯಾಗಲು ಅಗತ್ಯವಾದ ಪ್ರಾಯೋಗಿಕ ತರಬೇತಿಯನ್ನು ಸಹಪಠ್ಯ ಚಟುವಟಿಕೆಗಳ ಮುಖೇನ ಕೊಡಲು ಖಂಡಿತ ಸಾಧ್ಯ, ಸರ್ಕಾರಕ್ಕೆ ಮತ್ತು ಶಿಕ್ಷಕರಿಗೆ ಈ ಕುರಿತಾದ ಬದ್ಧತೆ ಇದ್ದರೆ. ೬೦ ರ ದಶಕದಲ್ಲಿ ನಾನು ಪ್ರೌಢಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದಾಗ ಈ ಕುರಿತು ಮಾಡಿದ ಕೆಲವು ಪ್ರಯೋಗಗಳು ನೀಡಿದ ಫಲಿತಾಂಶವನ್ನು ಆಧರಿಸಿ ಇದು ಸಾಧ್ಯ ಎಂದು ಧೈರ್ಯವಾಗಿ ಹೇಳಬಲ್ಲೆ. ಶಾಲಾ ಶಿಕ್ಷಣದ ಸುಧಾರಣೆಯ ಗುರಿ ಹಾಕಿಕೊಂಡಿರುವ ಸಂಸ್ಥೆಗಳು ಈ ನಿಟ್ಟಿನಲ್ಲಿ ಈಗಲೂ ಕ್ರಿಯಾಶೀಲರಾಗದೆ ಇದ್ದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನು ಇನ್ನೂ ಶೋಷಿಸುತ್ತಾರೆ ನಾವೇ ಆಯ್ಕೆ ಮಾಡಿದವರು.

Posted in ಅನುಭವಾಮೃತ, ಶಿಕ್ಷಣ | Tagged , | Leave a comment

ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು (ವ್ಯಾಲ್ಯೂಸ್) ಕಲಿಸುವುದು ಹೇಗೆ?

ಮೌಲ್ಯಗಳು ಎಂದರೇನು ಎಂಬ ಪ್ರಶ್ನೆಗೆ ‘ನಿರ್ದಿಷ್ಟ ವಸ್ತು, ಕ್ರಿಯೆ ಮತ್ತು ಸನ್ನಿವೇಶಗಳಿಗೆ ವ್ಯಕ್ತಿಗಳು ನೀಡುವ ಬೆಲೆಗೆ ಸಂಬಂಧಿಸಿದ ಅದ್ವಿತೀಯ ಶಾಬ್ದಿಕ ಪರಿಕಲ್ಪನೆಗಳು’ ಎಂಬ ಸೈದ್ಧಾಂತಿಕ ಉತ್ತರ ನೀಡಬಹುದಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸರ್ವಸಮ್ಮತ ಉತ್ತರ ನೀಡುವುದು ಕಷ್ಟ. ಕೆಲವು ವಿಶೇಷಜ್ಞರು ವ್ಯಕ್ತಿಯ ಮನೋಧರ್ಮಗಳ (ಆಟಿಟ್ಯೂಡ್) ಸಂಘಟನೆಯನ್ನು ಮೌಲ್ಯ ಎಂದು ಉಲ್ಲೇಖಿಸುವುದೂ ಉಂಟು. ಅದೇನೇ ಇರಲಿ ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು, ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಬಹುತೇಕ ಸನ್ನಿವೇಶಗಳಲ್ಲಿ ನಾವು ಕೈಗೊಳ್ಳುವ ಮೌಲ್ಯಾಧಾರಿತ ತೀರ್ಮಾನಗಳು ವ್ಯಕ್ತಿನಿಷ್ಠವೂ ಸಾಪೇಕ್ಷವೂ ಆಗಿರುತ್ತವೆ. (ಅ) ನಿರ್ದಿಷ್ಟ ಅಂಶಕ್ಕೆ ನಾವು ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಸೂಚಿಸುವ ಪರಿಮಾಣಾತ್ಮಕ ಆಯಾಮ, (ಆ) ನಿರ್ದಿಷ್ಟ ಮೌಲ್ಯಕ್ಕೆ ನಾವು ಎಷ್ಟು ಬದ್ಧರಾಗಿರುತ್ತೇವೆ ಎಂಬುದನ್ನು ಸೂಚಿಸುವ ಗುಣಾತ್ಮಕ ಆಯಾಮ ಮತ್ತು (ಇ) ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳ ನಡುವಿನ ಸಂಬಂಧವನ್ನು ಸೂಚಿಸುವ ಅಂತರ್- ಸಂಬಂಧ ಆಯಾಮ – ಈ ಮೂರು ಆಯಾಮಗಳು ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳಿಗೆ ಇರುತ್ತವೆ.

ಸಾಮಾನ್ಯವಾಗಿ ಮೌಲ್ಯಗಳು ಅನುಭವದಿಂದ ಅಂತಸ್ಥವಾಗುತ್ತವೆ. ಸುತ್ತಣ ಆಗುಹೋಗುಗಳ ವೀಕ್ಷಣೆ, ಸಮವಯಸ್ಕರ ಮತ್ತು ಹಿರಿಯರ ಅನುಕರಣೆ, ಅರಿವಿಲ್ಲದೆ ಜರಗುವ ಸೋಪಾಧಿಕ (ಕನ್ಡೀಷನ್ಡ್) ಕಲಿಕೆ ಇವೇ ಮೊದಲಾದವುಗಳ ಮೂಲಕ ಮೌಲ್ಯಗಳು ಸಹಜವಾಗಿ ಅಂತಸ್ಥಗೊಳ್ಳುತ್ತವೆ. ಆದ್ದರಿಂದ ಇತರ ಪಠ್ಯವಿಷಯ ಸಂಬಂಧಿತ ಜ್ಞಾನ ಮತ್ತು ಕುಶಲತೆಗಳನ್ನು ಕಲಿಸಿದಂತೆ ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಆದರೂ ಅಗತ್ಯವಾದ ಅನುಭವಗಳನ್ನು ಮಕ್ಕಳಿಗೆ ಒದಗಿಸುವುದರ ಮೂಲಕ ಅವರಲ್ಲಿ ಅಪೇಕ್ಷಿತ ಮೌಲ್ಯಗಳು ಅಂತಸ್ಥವಾಗುವಂತೆ ಮಾಡುವುದು ಸಾಧ್ಯ. ಇದಕ್ಕಾಗಿ ಶಿಕ್ಷಕರು ಮತ್ತು ಜನ್ಮದಾತೃಗಳು ಮಾಡಬೇಕಾದದ್ದು ಇಷ್ಟು:

೧. ಅನುಕರಣೀಯ ಮಾದರಿ ಒದಗಿಸಬೇಕು. ಈ ಅನುಕರಣೀಯ ಮಾದರಿ ತಾವೇ ಆಗಿದ್ದರೆ ಅತ್ಯತ್ತಮ. ಎಳೆವಯಸ್ಸಿನಲ್ಲಿ ಸಾಮಾನ್ಯವಾಗಿ ತಂದೆತಾಯಿಯರನ್ನೂ ತದನಂತರ ಶಿಕ್ಷಕರನ್ನೂ ‘ಸಾಮಾಜಿಕ ನಡೆನುಡಿ, ಆಚಾರವಿಚಾರ, ಸಂಪ್ರದಾಯ’ ಇವೇ ಮೊದಲಾದವುಗಳಿಗೆ ಮಕ್ಕಳು ತಮಗರಿವಿಲ್ಲದೆಯೇ ಅನುಕರಿಸುತ್ತಾರೆ ಎಂಬುದು ಅನುಭವವೇದ್ಯ ತಥ್ಯ. ಐತಿಹಾಸಿಕ ಅಥವ ಪೌರಾಣಿಕ ಪ್ರಸಿದ್ಧರನ್ನು ಅನುಕರಿಸುವ ಸಾಧ್ಯತೆ ಬಲು ಕಮ್ಮಿ. ಹದಿಹರೆಯದ ನಂತರ ತಮ್ಮ ದೃಷ್ಟಿಯಲ್ಲಿ ‘ಜನಪ್ರಿಯರು’, ‘ಶಕ್ತಿಶಾಲಿಗಳು’, ‘ಉನ್ನತ ಸ್ಥಾನಮಾನ ಗಳಿಸಿದವರು’ ಅನ್ನಿಸಿಕೊಂಡ ಜೀವಂತ ವ್ಯಕ್ತಿಗಳನ್ನು ಅರಿವಿದ್ದೋ ಅರಿವಿಲ್ಲದೆಯೋ ಅನುಕರಿಸುತ್ತಾರೆ. ಅಂದ ಮೇಲೆ, ಇಂದಿನ ಯುವ ಪೀಳಿಗೆಯನ್ನು ದೂಷಿಸುವುದು ಸರಿಯೇ ನೀವೇ ಆಲೋಚಿಸಿ. ಯುವಜನಾಂಗದಲ್ಲಿ ಉತ್ತಮ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುವವರು ಸದಾ ನೆನಪಿನಲ್ಲಿ ಇಟ್ಟುಕೊಂಡಿರ ಬೇಕಾದ ತಥ್ಯ ಇಂತಿದೆ: ‘ಏನನ್ನು ಮಾಡಲು ಮಕ್ಕಳಿಗೆ ಹೇಳುತ್ತೀರಿ ಎಂಬುದು ಮುಖ್ಯವಲ್ಲ. ಅವರ ಸಾನ್ನಿಧ್ಯದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಬಲು ಮುಖ್ಯ’. ನಿಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳು ನಿಮ್ಮದಾದದ್ದು ಹೇಗೆ ಎಂಬುದರ ಕುರಿತು ಆಲೋಚಿಸಿದರೆ ಈ ಹೇಳಿಕೆಯ ಮಹತ್ವ ನಿಮಗೇ ತಿಳಿಯುತ್ತದೆ.

ಕೆಲವು ಮೌಲ್ಯಗಳು ನನ್ನಲ್ಲಿ ಅಂತಸ್ಥವಾಗಲು ಕಾರಣವಾಗಿರಬಹುದಾದ ಜೀವನಾನುಭವಗಳ ಪೈಕಿ ಕೆಲವು ಇಂತಿವೆ:

(ಆ) ನನ್ನ ದೊಡ್ಡಪ್ಪನವರು (ದಿ ಎ ಪಿ ಶ್ರೀನಿವಾಸ ರಾವ್) ಮುಖ್ಯೋಪಾಧ್ಯಾಯರಾಗಿದ್ದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾಗಿನ ಒಂದು ಅನುಭವ – ದೊಡ್ಡಪ್ಪನವರ ಮನೆಯಲ್ಲಿಯೇ ನನ್ನ ವಾಸ್ತವ್ಯ. ಅದೊಂದು ದಿನ ಬೆಳಗ್ಗೆ ಮಧ್ಯವಯಸ್ಸಿನ ಪುರುಷರೊಬ್ಬರು ಎರಡು ಚಿಪ್ಪು ಬಾಳೆಹಣ್ಣಿನೊಂದಿಗೆ ಮನೆಗೆ ಬಂದು ‘ಸ್ವಾಮೀ, ಇದು ನಮ್ಮ ತೋಟದ ಹಣ್ಣು. ನಿಮಗೆ ಕೊಡೋಣವೆಂದು ಬಂದೆ’ ಅಂದರು. ದೊಡ್ಡಪ್ಪನವರ ಪ್ರತಿಕ್ರಿಯೆ ‘ ನಿನ್ನ ಮಗ ದಡ್ಡ. ಈ ವರ್ಷ ಫೇಲಾಗುವುದು ಖಾತರಿ. ಅವನನ್ನು ಪಾಸು ಮಾಡಿ ಎಂದು ಹೇಳಲೋಸುಗ ಈ ಲಂಚ ಕೊಡಲು ಬಂದಿದ್ದೀಯಾ, ತೊಲಗಾಚೆ. ಇನ್ನೊಮ್ಮೆ ಇತ್ತ ಸುಳಿದರೆ ಜವಾನರ ಕೈನಿಂದ ತಳ್ಳಿಸುತ್ತೇನೆ’

(ಆ) ನನ್ನ ತಂದೆಯವರು (ದಿ ಎ ಪಿ ವೆಂಕಟಸುಬ್ಬಯ್ಯ) ಸರ್ಕಾರೀ ಆಸ್ಪತ್ರೆಯ ವೈದ್ಯರು. ಅಂದು ಕೊಡಗಿನಲ್ಲಿದ್ದ ಬಹುತೇಕ ಸರ್ಕಾರೀ ಆಸ್ಪತ್ರೆಯ ವೈದ್ಯರಿಗೆ ಆಸ್ಪತ್ರೆಯ ಆವರಣದಲ್ಲಿಯೇ ವಸತಿ ಸೌಕರ್ಯ ಇತ್ತು. ಆದ್ದರಿಂದ, ಆಸ್ಪತ್ರೆಯಲ್ಲಿ ಏನಾದರೂ ವಿಶೇಷ ಘಟನೆ ಘಟಿಸಿದರೆ ಅದನ್ನು ನಾವು ಮನೆಯಿಂದಲೇ ನೋಡಬಹುದಿತ್ತು. ಅದೊಂದು ದಿನ ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ನನ್ನ ತಂದೆಯವರು ಬಲು ಜೋರಾಗಿ ‘ಚೀರುತ್ತಿದ್ದದ್ದು’ ಕೇಳಿಸಿತು. ಅದೇಕೆಂದು ನೋಡಿದಾಗ ಕಂಡದ್ದು – ಅದಾರನ್ನೋ ನನ್ನ ತಂದೆಯವರು ಕತ್ತಿನಪಟ್ಟಿ ಹಿಡಿದು ದರದರನೆ ಎಳೆದು ಆಸ್ಪತ್ರೆಯಿಂದ ಹೊರಹಾಕುತ್ತಿದ್ದರು – ಸರ್ಕಾರೀ ಡಾಕ್ಟರಿಗೆ ಲಂಚ ಕೊಡುವಷ್ಟು ಧೈರ್ಯವೇ ನಿನಗೆ – ಎಂಬ ಉಕ್ತಿಯೊಡನೆ. ಅವನು ಮಾಡಿದ ಅಪರಾಧ – ಚುಚ್ಚುಮದ್ದು ನೀಡಿದ್ದಕ್ಕೆ ಎರಡು ರೂಪಾಯಿ ಕೊಡಲು ಪ್ರಯತ್ನಿಸಿದ್ದು.

(ಇ) ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದ ಐದು ವರ್ಷಗಳಲ್ಲಿ ಗಣಿತದ  ಉಪನ್ಯಾಸಕರಾಗಿದ್ದ ದಿ. ಜಿ ಟಿ ನಾರಾಯಣ ರಾವ್ ಅವರು ಅವರ ತರಗತಿಗಳಿಗೆ ಒಂದು ನಿಮಿಷ ತಡವಾಗಿ ಬಂದದ್ದೂ ಇಲ್ಲ, ಒಂದು ನಿಮಿಷ ತಡವಾಗಿ ತರಗತಿ ಬಿಟ್ಟದ್ದೂ ಇಲ್ಲ.

ಈ ಉದಾಹರಣೆಗಳನ್ನು ಉಲ್ಲೇಖಿಸಿದ್ದು ಏಕೆ ಎಂಬುದನ್ನು ನೀವು ಊಹಿಸಬಲ್ಲಿರಿ ಎಂದು ನಂಬುತ್ತೇನೆ.

೨. ಅಪೇಕ್ಷಿತ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಕ್ಕುದಾದ ಜ್ಞಾನದ ಬುನಾದಿ ಹಾಕಬೇಕು. ಮಕ್ಕಳ ವಯೋಮಾನಕ್ಕೆ ಹೊಂದಾಣಿಕೆ ಆಗುವಂತೆ ನೀತಿಕಥೆಗಳ ಅಧ್ಯಯನ, ಮೌಲ್ಯಗಳನ್ನು ಅಂತಸ್ಥಗೊಳಿಸಿಕೊಳ್ಳ ಬೇಕಾದದ್ದರ ಆವಶ್ಯಕತೆಯ ಕುರಿತಾದ ಚರ್ಚೆ, ಸಾಮಾಜಿಕ ಮತ್ತು ವೈಯಕ್ತಿಕ ಒಳಿತನ್ನು ಸಾಧಿಸಬಲ್ಲ ಮೌಲ್ಯಗಳು ಯಾವುವು ಎಂಬುದರ ಕುರಿತಾದ ಚರ್ಚೆ, ಈ ಮೌಲ್ಯಗಳನ್ನು ಉಲ್ಲಂಘಿಸಿದರೆ ಏನಾಗಬಹುದು ಎಂಬುದರ ಕುರಿತಾದ ಚರ್ಚೆ, ವಿಭಿನ್ನ ಮತಗಳ (ಗಮನಿಸಿ: ‘ಒಂದು ಮತದ’ ಅಲ್ಲ) ‘ಪವಿತ್ರ ಗ್ರಂಥ’ಗಳು ಪ್ರತಿಪಾದಿಸಿರುವ ಇಂದಿಗೂ ಅನುಷ್ಠಾನಯೋಗ್ಯ ಮೌಲ್ಯಗಳ ಸರ್ವೇಕ್ಷಣೆ ಇವೇ ಮೊದಲಾದ ತಂತ್ರಗಳನ್ನು ಉಪಯೋಗಿಸುವುದರಿಂದ ಜ್ಞಾನದ ಬುನಾದಿ ಹಾಕಬಹುದು. ಅನುಕರಣ ಯೋಗ್ಯ ಜೀವಂತ ಮಾದರಿ ಒದಗಿಸದೆ ಇದ್ದರೆ ಈ ತಂತ್ರಗಳು ನಿರೀಕ್ಷಿತ ಫಲ ನೀಡುವುದಿಲ್ಲ.

೩. ಅಪೇಕ್ಷಿತ ಮೌಲ್ಯ ವರ್ತನೆಯ ರೂಪದಲ್ಲಿ ಪ್ರಕಟವಾದಾಗಲೆಲಲ್ಲ ಹಿತಕರ ಅನುಭವ ಆಗುವಂತೆ ಮಾಡಬೇಕು. ಅನೇಕ ಸಲ ಅಂತಸ್ಥ ಉತ್ತಮ ಮೌಲ್ಯ ವರ್ತನೆಯ ರೂಪದಲ್ಲಿ ಪ್ರಕಟವಾದಾಗ ಕಹಿ ಅನುಭವ ಆದರೆ ಆ ಮೌಲ್ಯಕ್ಕೆ ಇರುವ ಬದ್ಧತೆ ಕ್ಷೀಣಿಸುತ್ತದೆ. ನಾವೇಕೆ ಯಾವಾಗಲೂ ಸತ್ಯವನ್ನೇ ನುಡಿಯುವುದಿಲ್ಲ? ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಏಕೆ ಮಾಡುತ್ತೇವೆ? ಇಂಥ ಪ್ರಶ್ನೆಗಳಿಗೆ ಆತ್ಮಾವಲೋಕನದ ಮೂಲಕ ಉತ್ತರ ಅನ್ವೇಷಿಸಿಕೊಂಡರೆ ಈ ಹೇಳಿಕೆಯ ಸತ್ಯತೆ ನಿಮಗೇ ತಿಳಿಯುತ್ತದೆ.

೪. ಅಪೇಕ್ಷಿತ ಮೌಲ್ಯಗಳು ದೃಢವಾಗಿ ಬೇರೂರುವಂತೆ ಮಾಡಲು ಆಗಿಂದಾಗ್ಗೆ ಯುಕ್ತ ಅನುಭವಗಳನ್ನು ಒದಗಿಸಬೇಕು. ಮೌಲ್ಯಗಳು ಅಂತಸ್ಥವಾಗಲು ಒಂದು ಅನುಭವ ಸಾಕಾಗುವುದಿಲ್ಲ. ಇದು ಮಂದಗತಿಯಲ್ಲಿ ಅನೇಕ ಅನುಭವಗಳ ಮುಖೇನ ಜರಗುವ ಪ್ರಕ್ರಿಯೆ. ಎಂದೇ, ಈ ಮುನ್ನ ಹೆಸರಿಸಿದ ತಂತ್ರಗಳ ಜೊತೆಗೆ ಪಾತ್ರಾಭಿನಯ (ರೋಲ್ ಪ್ಲೆ) ತಂತ್ರವನ್ನೂ ಇದಕ್ಕಾಗಿ ಸಾಧ್ಯವಿರುವಷ್ಟು ಹೆಚ್ಚು ಸಂಖ್ಯೆಯಲ್ಲಿ ಪ್ರಯೋಗಿಸ ಬೇಕು.

ಈ ‘ಮಾಡಬೇಕಾದವು’ಗಳ ಪಟ್ಟಿಯಲ್ಲಿ ನಮೂದಿಸಿದ ೧ ನೆಯದ್ದನ್ನು ಮಾಡದೆ ಉಳಿದವುಗಳನ್ನು ಮಾಡುವುದರಿಂದ ನಿರೀಕ್ಷಿತ ಫಲ ದೊರೆಯುವುದಿಲ್ಲ ಅನ್ನುವುದಕ್ಕೆ  ಇಂದಿನ ಸಮಾಜದ ಆಗುಹೋಗುಗಳೇ ಪುರಾವೆ.  

Posted in ಅನುಭವಾಮೃತ, ಶಿಕ್ಷಣ | Tagged , , | Leave a comment

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೯

ಚಕ್ರಜ (ಸೈಕ್ಲಾಯಿಡ್ ) ಆಕೃತಿಯ ವಿಶಿಷ್ಟತೆ

ಚಿತ್ರ ೧ ರಲ್ಲಿ ಇರುವ ವಕ್ರಗಳನ್ನು ಗಮನಿಸಿ. ಯಾವುದೋ ವೃತ್ತದ ಭಾಗದಂತೆ ಮೇಲ್ನೋಟಕ್ಕೆ ಗೋಚರಿಸುವ ಇವು ವಾಸ್ತವವಾಗಿ ಯಾವುದೇ ವೃತ್ತದ ಭಾಗಗಳೂ ಅಲ್ಲ, ಯಾದೃಚ್ಛಿಕವಾಗಿ ಎಳೆದ ವಕ್ರಗಳೂ ಅಲ್ಲ. ಇವು ಚಕ್ರಜ ಎಂಬ ವಿಶಿಷ್ಟ ವಕ್ರಗಳು.

ಚಕ್ರಜ (i) ಅನ್ನು ತಲೆಕೆಳಗೆ ಮಾಡಿ ಪಡೆದದ್ದು ಚಕ್ರಜ (ii).  ಯಾವುದೇ ವೃತ್ತವು (ಚಕ್ರ) ನೇರ ರೇಖಾಪಥದಲ್ಲಿ ಉರುಳುವಾಗ ಅದರ ಪರಿಧಿಯ ಮೇಲಿನ ಯಾವುದೇ ಬಿಂದು ರೇಖಿಸುವ ಪಥವೇ (ಚಿತ್ರ ೨) ಚಕ್ರಜ  ಚಕ್ರದಂತೆ ವೃತ್ತವನ್ನು ಉರುಳಿಸಿ ಇದನ್ನು ಪಡೆಯುವುದರಿಂದ ಈ ಹೆಸರು.

ಚಿತ್ರ ೨ ಅನ್ನು ಸೂಕ್ಷ್ಮವಾಗಿ ವೀಕ್ಷಿಸಿ. ಚಕ್ರಜದ ಅಗಲ ‘ಅ ಆ’  ಅದನ್ನು ಸೃಷ್ಟಿಸಿದ ವೃತ್ತದ ಪರಿಧಿಗೆ ಸಮವಾಗಿಯೂ ಎತ್ತರವು ವೃತ್ತದ ವ್ಯಾಸಕ್ಕೆ ಸಮವಾಗಿಯೂ ಇರುತ್ತದೆ. ವೃತ್ತದ ತ್ರಿಜ್ಯ r ಎಂದಾದರೆ  ಚಕ್ರಜದ ಅಗಲ 2лr ಮತ್ತು ಎತ್ತರ 2r ಆಗಿರುತ್ತದೆ.

ಅಂದ ಮೇಲೆ, ಅಪೇಕ್ಷಿತ ಅಗಲದ ಅಥವ ಎತ್ತರದ ಚಕ್ರಜ ಪಡೆಯುವ ವಿಧಾನ ಇಂತಿದೆ: ಎಷ್ಟು ಎತ್ತರದ ಚಕ್ರಜ ಬೇಕೆಂಬುದನ್ನು ನಿರ್ಧರಿಸಿ. ಎತ್ತರವನ್ನು л ನಿಂದ ಗುಣಿಸಿದರೆ ಎಷ್ಟು ಅಗಲದ ಚಕ್ರಜ ಇದಾಗಿರುತ್ತದೆ ಎಂಬುದು ತಿಳಿಯುತ್ತದೆ. ಚಕ್ರಜದ ಅಗಲಕ್ಕೂ ಎತ್ತರಕ್ಕೂ ಸಂಬಂಧ ಇರುವುದರಿಂದ ಎತ್ತರ ಹೆಚ್ಚಿಸಿದರೆ ಅದಕ್ಕೆ ಅನುಗುಣವಾಗಿ ಅಗಲವೂ ಹೆಚ್ಚುತ್ತದೆ ಎಂಬುದು ನೆನಪಿರಲಿ. ನೀವು ನಿರ್ಧರಿಸಿದ ಎತ್ತರದ ½ ದಷ್ಟು ತ್ರಿಜ್ಯ ಇರುವ ವೃತ್ತವೊಂದನ್ನು (ಅರ್ಥಾತ್ ಚಕ್ರವೊಂದನ್ನು) ದಪ್ಪರಟ್ಟಿನಲ್ಲಿ ರಚಿಸಿ. ಅದರ ಪರಿಧಿಯ ಅಂಚಿನಲ್ಲಿ ಪೆನ್ಸಿಲ್ ಮೊನೆ ತೂರಿಸುವಷ್ಟು ಗಾತ್ರದ ರಂಧ್ರ ಮಾಡಿ. ಬಿಳಿ ದಪ್ಪಕಾಗದದ ಹಾಳೆಯ ಮೇಲೆ ನೇರ ರೇಖೆಯೊಂದನ್ನು ಎಳೆಯಿರಿ. ಈ ರೇಖೆಯಗುಂಟ ದಪ್ಪನೆಯ ಅಂಚು ಇರುವಂತೆ ಅಳತೆಪಟ್ಟಿಯನ್ನು ಅಥವ ನೇರವಾದ ಅಂಚು ಇರುವ ತುಸು ದಪ್ಪನೆಯ ಮರದ ಪಟ್ಟಿಯೊಂದನ್ನು ಒತ್ತಿ ಹಿಡಿದುಕೊಳ್ಳುವಂತೆ ನಿಮ್ಮ ಮಿತ್ರನಿಗೆ ಹೇಳಿ. ಇದು ರಟ್ಟಿನ ಚಕ್ರವನ್ನು ನೇರರೇಖೆಯ ಮೇಲೆ ಉರುಳಿಸಲು ನೆರವು ನೀಡುತ್ತದೆ. ರಟ್ಟಿನ ಚಕ್ರದ ಅಂಚಿನಲ್ಲಿ ಇರುವ ರಂಧ್ರದಲ್ಲಿ ಪೆನ್ಸಿಲ್ ಮೊನೆ ತೂರಿಸಿ ಚಕ್ರವನ್ನು ನೇರ ರೇಖೆಯಗುಂಟ ಉರುಳಿಸುತ್ತಾ ಪೆನ್ಸಿಲ್ ಮೊನೆಯ ಪಥವನ್ನು ರೇಖಿಸಿ  (ಚಿತ್ರ ೩) ಅಪೇಕ್ಷಿತ ಗಾತ್ರದ ಚಕ್ರಜ ಪಡೆಯಿರಿ

(ಗಮನಿಸಿ: r = ೭ ಅಥವ ೭ ರ ಗುಣಕಗಳು ಆಗಿದ್ದರೆ 2лr ನ ಮೌಲ್ಯದಲ್ಲಿ ದಶಮಾಂಶ ಇರುವುದಿಲ್ಲ, ಅಳತೆಮಾಡುವುದು ಸುಲಭವಾಗುತ್ತದೆ).

ಚಕ್ರಜದ ವಿಶಿಷ್ಟತೆ ತಿಳಿಯಲು ನೀವು ಪೂರ್ವ ಸಿದ್ಧತೆಯೊಂದಿಗೆ ಮಾಡಬೇಕಾದ ಪ್ರಯೋಗಗಳು ಇವು:

ಪ್ರಯೋಗ ೧

ಪೂರ್ವಸಿದ್ಧತೆ: r = ೭ ಸೆಂಮೀ ಇಟ್ಟುಕೊಂಡು ಈ ಮೇಲೆ ತಿಳಿಸಿದ ವಿಧಾನದಿಂದ ಬಿಳಿ ಕಾಗದದ ಹಾಳೆಯ ಮೇಲೆ ಚಕ್ರಜ ರಚಿಸಿ. ಅದು ೧೪ ಸೆಂಮೀ ಎತ್ತರವೂ ೪೪ ಸೆಂಮೀ ಅಗಲವೂ ಇರುತ್ತದೆ (ಚಿತ್ರ ೪.೧). ಒಂದು ದಾರದ ನೆರವಿನಿಂದ ವಕ್ರದ ಉದ್ದವನ್ನು ಅಳತೆ ಮಾಡಿ, ಅಳತೆಯನ್ನು ಒಂದೆಡೆ ಬರೆದು ಇಟ್ಟುಕೊಳ್ಳಿ. ಬಲು ಜಾಗರೂಕತೆಯಿಂದ ಚಕ್ರಜದ ಚಿತ್ರವನ್ನು ಭೂತಲಕ್ಕೆ ಲಂಬವಾಗಿ ನಿಲ್ಲಿಸ ಬಹುದಾದ ದಪ್ಪ ರಟ್ಟಿನ ಮೇಲೆ ನಕಲು ಮಾಡಿ (ಚಿತ್ರ ೪.೨, ೪.೩). ಒಂದು ದಪ್ಪವಾಗಿರುವ ಕಾಗದದ ಹಾಳೆಯಿಂದ (ಮೈಸೂರಿನಲ್ಲಿ ಇದಕ್ಕೆ ಕೆ ಜಿ ಶೀಟ್ ಅನ್ನುತ್ತಾರೆ) ಚಕ್ರಜದ ವಕ್ರದಷ್ಟು ಉದ್ದ ಮತ್ತು ೩ ಸೆಂಮೀ ಅಗಲದ ಪಟ್ಟಿಯೊಂದನ್ನು ತಯಾರಿಸಿ (ಚಿತ್ರ ೪.೪). ಪಟ್ಟಿಯ ಎರಡೂ ಅಂಚುಗಳಲ್ಲಿ ೦.೫ ಸೆಂಮೀ ಭಾಗದಷ್ಟನ್ನು ಮೇಲಕ್ಕೆ ಮಡಚಿಚಿತ್ರದಲ್ಲಿ ತೋರಿಸಿದಂತೆ ಕತ್ತರಿಸಿ. ಆಚೆಈಚೆ ತಡೆಗೋಡೆ ಇರುವ ಪಥವೊಂದು ತಯಾರಾಯಿತು. ರಟ್ಟಿನ ಮೇಲೆ ನಕಲು ಮಾಡಿರುವ ಚಕ್ರಜ ವಕ್ರಕ್ಕೆ ನೀವು ತಯಾರಿಸಿದ ಪಥವು ಕರಾರುವಾಕ್ಕಾಗಿ ಹೊಂದಾಣಿಕೆ ಆಗುವಂತೆಯೂ ಪಥ ರಟ್ಟಿಗೆ ಲಂಬವಾಗಿರುವಂತೆಯೂ ಒಂದು ಮಡಚಿದ ಅಂಚನ್ನು ಗೋಂದಿನ ನೆರವಿನಿಂದ ರಟ್ಟಿಗೆ ಅಂಟಿಸಿ (ಚಿತ್ರ ೪.೪ ಅ ಮತ್ತ ಆ). ಪಥಯುತ ರಟ್ಟನ್ನು ಪುಸ್ತಕಗಳು ಅಥವ ಬೇರೆ ಯಾವುದಾದರೂ ಆಧಾರಗಳ ನೆರವಿನಿಂದ ಮೇಜಿಗೆ ಲಂಬವಾಗಿ ನಿಲ್ಲಿಸಿ (ಚಿತ್ರ ೪.೫). ಇಷ್ಟು ಪ್ರಯೋಗ ಮಾಡಲು ಅಗತ್ಯವಾದ ಪೂರ್ವಸಿದ್ಧತೆ. [ನೀವು ತುಸು ಹಣ ವ್ಯಯಿಸಲು ಸಿದ್ಧವಿದರೆ ನಿಪುಣ ಬಡಗಿಯ ನೆರವಿನಿಂದ ಇಂಥ ಪಥವನ್ನು ಮರದ ಹಲಗೆಯಲ್ಲಿ ಮಾಡಿಸಬಹುದು (ಚಿತ್ರ ೪.೬) ಅಥವ ನಿಪುಣ ಕಮ್ಮಾರರ ನೆರವಿನಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಲ್ಯುಮಿನಿಯಮ್ ‘ಚಾನೆಲ್’ಗಳನ್ನು ಬಾಗಿಸಿಯೂ (ಚಿತ್ರ ೪.೭) ತಯಾರಿಸಬಹುದು -ಇವನ್ನು ಸುದೀರ್ಘ ಕಾಲ ಉಪಯೋಗಿಸಬಹುದು. ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶಿಸಲೂ ಬಹುದು]

ಮಾಡ ಬೇಕಾದ ಪ್ರಯೋಗ: ಚಿತ್ರ ೪.೮ ರಲ್ಲಿ ತೋರಿಸಿದಂತೆ ಚಕ್ರಜಾಕಾರದ ಪಥದ ಅತ್ಯಂತ ಕೆಳ ಬಿಂದುವಿನ ವಿರುದ್ಧ ಪಾರ್ಶ್ವಗಳ ಎರಡು ವಿಭಿನ್ನ ಬಿಂದುಗಳಲ್ಲಿ ಪುಟ್ಟ ಗೋಲಿಗಳನ್ನು (ನೀವೇ ತಯಾರಿಸಿದ ಉಪಕರಣದಲ್ಲಿ ಸೈಕಲ್ ಬಾಲ್ ಬೇರಿಂಗ್ ಉಪಯೋಗಿಸಿ, ಬೇರೆ ಗೋಲಿಗಳ ಭಾರವನ್ನು ಪಥ ಭರಿಸದೇ ಇರಬಹುದು) ಇಟ್ಟು ಏಕಕಾಲದಲ್ಲಿ ಬಿಟ್ಟರೆ ಯಾವುದು ಮೊದಲು ಪಥದ ಅತ್ಯಂತ ಕೆಳಬಿಂದುವನ್ನು ತಲುಪಬಹುದು? ಬೇರೆ ಬೇರೆ ಬಿಂದುಗಳಲ್ಲಿ ಗೋಲಿಗಳನ್ನು ಇಟ್ಟು ಪರಿಣಾಮ ವೀಕ್ಷಿಸಿ ಸಾರ್ವತ್ರೀಕರಣ ರೂಪಿಸಿ. ಎಲ್ಲ ಸಂದರ್ಭಗಳಲ್ಲಿಯೂ ಪುಟ್ಟ ಗೋಲಿಗಳು ಏಕಕಾಲದಲ್ಲಿ ಅತ್ಯಂತ ಕೆಳಬಿಂದುವನ್ನು ತಲಪುವ ವಿದ್ಯಮಾನ ನಿಮ್ಮನ್ನು ಬೆರಗುಗೊಳಿಸುವುದು ಖಚಿತ. ಇದು ಚಕ್ರಜಾಕಾರದ ಪಥದ ಒಂದು ವೈಶಿಷ್ಟ್ಯ.

ಪ್ರಯೋಗ ೨

ಪೂರ್ವಸಿದ್ಧತೆ: ಅಪೇಕ್ಷಿತ ಗಾತ್ರದ ಚಕ್ರಜ ರಚಿಸುವ ವಿಧಾನ ನಿಮಗೆ ತಿಳಿದಿದೆ. ಎಂದೇ, ಈ ಪ್ರಯೋಗವನ್ನು ನೀವು ಯಶಸ್ವಿಯಾಗಿ ಮಾಡಬಹುದು ನಿಮ್ಮಿಂದ ಸಾಧ್ಯವಿರುವಷ್ಟು ದೊಡ್ಡ ಚಕ್ರಜವನ್ನು ದಪ್ಪ ಕಾಗದದ ಹಾಳೆಯ ಮೇಲೆ ರಚಿಸಿ. .  ಇದನ್ನು ಉಪಯೋಗಿಸಿಕೊಂಡು ಮರದ ಪಟ್ಟಿ ಅಥವ ಬೇರೆ ಯಾವುದಾದರೂ ಆಧಾರಗಳ ನೆರವಿನಿಂದ  ನೀರು ಹಾಯಿಸಲು ಉಪಯೋಗಿಸುವ ಪಾರಕ ಪ್ಲಾಸ್ಟಿಕ್ ಕೊಳವೆಯೊಂದನ್ನು ೧/೨ ಚಕ್ರಜಾಕಾರದಲ್ಲಿ ಭೂತಲಕ್ಕೆ ಲಂಬವಾಗಿ ನಿಲ್ಲಿಸಿ (ಚಿತ್ರ ೫).  ಈ ಕೊಳವೆಯ ಮೇಲ್ತುದಿ ಮತ್ತು ಕೆಳತುದಿಗಳ ನಡುವಿನ ಅಂತರದಷ್ಟೇ ಉದ್ದ ಇರುವ ಪಾರಕ ಪ್ಲಾಸ್ಟಿಕ್ ಕೊಳವೆಯೊಂದನ್ನು ತುಸು ದೂರದಲ್ಲಿ  ಅದರ ತುದಿಗಳು ಚಕ್ರಜಾಕಾರದ ಕೊಳವೆಯ ತುದಿಗಳ ನೇರದಲ್ಲಿಯೇ ಇರುವಂತೆ ನಿಲ್ಲಿಸಿ. ಇದರಿಂದ ತುಸು ದೂರದಲ್ಲಿ ಎರಡು ಕೊಳವೆಗಳ ತುದಿಗಳ ನೇರದಲ್ಲಿಯೇ ತುದಿಗಳು ಇರುವಂತೆ ಯುಕ್ತ ತ್ರಿಜ್ಯವುಳ್ಳ (ತ್ರಿಜ್ಯ ಎಷ್ಟಿರ ಬೇಕೆಂಬುದನ್ನು ನೀವೇ ಪತ್ತೆಹಚ್ಚ ಬೇಕು) ವೃತ್ತವೊಂದರ ಭಾಗದ ಆಕಾರದಲ್ಲಿ ಮೂರನೇ ಕೊಳವೆಯೊಂದನ್ನು ಭೂತಲಕ್ಕೆ ಲಂಬವಾಗಿ ನಿಲ್ಲಿಸಿ.

ಚಕ್ರಜಾಕಾರದ ಒಂದು ಪಥ, ನೇರ ರೇಖೆಯಾಕಾರದ ಒಂದು ಪಥ, ವೃತ್ತಾಕಾರದ ಒಂದು ಪಥ – ಈ ಮೂರು ಪಥಗಳನ್ನು ಇವು ಪ್ರತಿನಿಧಿಸುತ್ತವೆ (ಗಮನಿಸಿ: ಹಣವಿದ್ದರೆ ಮರದಲ್ಲಿ ಮೂರು ಜಾರುಗುಪ್ಪೆಗಳ ರೂಪದಲ್ಲಿ ಈ ಪಥಗಳು ಇರುವ ಉಪಕರಣ ತಯಾರಿಸಬಹುದು)

ಮಾಡ ಬೇಕಾದ ಪ್ರಯೋಗ: ಈ ಕೊಳವೆಗಳ ಮೂಲಕ ಸರಾಗವಾಗಿ ಉರುಳಬಲ್ಲ ಮೂರು ಗೋಲಿ ಅಥವ ಬಾಲ್ ಬೇರಿಂಗುಗಳನ್ನು ಸಂಗ್ರಹಿಸಿ. ಪ್ರತೀ ಪಥದಲ್ಲಿ  ಗೋಲಿ ಚಲಿಸಿದರೆ ಎಷ್ಟು ದೂರ ಚಲಿಸಿದಂತಾಗುತ್ತದೆ ಎಂಬುದನ್ನು ಅಳತೆ ಮಾಡಿ ಪತ್ತೆ ಹಚ್ಚಿ. ಮೂರೂ ಪಥಗಳ ಮೇಲ್ತುದಿಗಳಲ್ಲಿ ಗೋಲಿಗಳನ್ನು ಉರುಳಲು ಬಿಟ್ಟರೆ ಅವು ಚಲಿಸುವ ದೂರಗಳು ಬೇರೆಬೇರೆ ಆಗಿರುತ್ತವೆ ಎಂಬುದನ್ನು ಗಮನಿಸಿ. ಮೂರೂ ಪಥಗಳ ಮೇಲ್ತುದಿ ಮತ್ತು ಕೆಳತುದಿಗಳು ಒಂದೇ ನೇರದಲ್ಲಿ ಇರುವುದರಿಂದ ಯಾವ ಪಥದಲ್ಲಿ ಗೋಲಿ ಚಲಿಸಿದರೂ ಅವುಗಳ  ಸ್ಥಾನಾಂತರಣ ಒಂದೇ ಆಗಿರುತ್ತದೆ ಎಂಬುದನ್ನೂ ಗಮನಿಸಿ. ಗೋಲಿಗಳನ್ನು ಕೊಳವೆಗಳ ಮೇಲ್ತುದಿಯಿಂದ ಏಕ ಕಾಲದಲ್ಲಿ ಉರುಳಲು ಬಿಟ್ಟರೆ ಯಾವುದು ಇನ್ನೊಂದು ತುದಿಯನ್ನು ಮೊದಲು ತಲಪುತ್ತದೆ ಊಹಿಸಿ. ಮಿತ್ರರ ನೆರವಿನಿಂದ ನಿಮ್ಮ ಊಹಿತ ಉತ್ತರ ಸರಿಯೇ ಎಂಬುದನ್ನು ಪರೀಕ್ಷಿಸಿ. ಚಕ್ರಜಾಕಾರದ ಪಥದಲ್ಲಿ ಚಲಿಸುವ ಗೋಲಿ ಮೊದಲು ಗುರಿ ತಲುಪುವ ಅಚ್ಚರಿ ವೀಕ್ಷಿಸಿ (ನಾನು ತಯಾರಿಸಿದ ಮರದ ಮಾದರಿಯಲ್ಲಿ ಗೋಲಿಗಳನ್ನು ಏಕಕಾಲದಲ್ಲಿ ಬಿಡಲು ನಾನೇ ತಯಾರಿಸಿದ್ದ ವಿದ್ಯುತ್ಕಾಂತಗಳನ್ನು ಸಜ್ಜುಗೊಳಸಿದ್ದೆ)

Posted in ವಿಜ್ಞಾನ - ಮಾಡಿ ಕಲಿ | Tagged , | Leave a comment

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೮

ಯಾರಿಂದಲೂ ಮಾಡಲಾಗದ ಕಾರ್ಯಗಳು

೧ ‘ಕೈ ಇಲ್ಲದ ನೇರ ಒರಗು-ಹಲಗೆ’ ಕುರ್ಚಿಯೊಂದರಲ್ಲಿ ಚಿತ್ರ ೧ ರಲ್ಲಿ ತೋರಿಸಿದಂತೆ ನೇರವಾಗಿ ಒರಗಿ ಕುಳಿತುಕೊಳ್ಳಿ. ಪಾದಗಳನ್ನು ನೆಲದ ಮೇಲೆ ಊರಿರಬೇಕು, ಕೆಳಕಾಲು ತೊಡೆಯ ಭಾಗಕ್ಕೆ ಮತ್ತು ಭೂತಲಕ್ಕೆ ಲಂಬವಾಗಿರಲಿ. ಕೈಗಳನ್ನು ತೊಡೆಯ ಮೇಲೆ ಇಟ್ಟುಕೊಳ್ಳಿ. (ಕುಳಿತ ಭಂಗಿಯಲ್ಲಿ ಎರಡು ಲಂಬಕೋನಗಳಿರುವುದನ್ನೂ ಗಮನಿಸಿ) ಇಂತು ಕುಳಿತ ನೀವು ಮಾಡಬಾಕಾದದ್ದು ಇಷ್ಟು: ಬೆನ್ನನ್ನು ಒಂದಿನಿತೂ ಮುಂದಕ್ಕೆ ಬಾಗಿಸದೆ, ಕೆಳಕಾಲನ್ನು ಅಥವ ಪಾದಗಳನ್ನು ಒಂದಿನಿತೂ ಮುಂದಕ್ಕೇ ಆಗಲಿ ಹಿಂದಕ್ಕೇ ಆಗಲಿ ಸರಿಸದೆ ನಿಲ್ಲಲು ಪ್ರಯತ್ನಿಸಿ. ಸ್ಥಿರ ಸಮಭಾರಸ್ಥಿತಿಯ (ಸ್ಟೇಬಲ್ ಇಕ್ವಿಲಿಬ್ರಿಯಮ್) ವೈಷಿಷ್ಟ್ಯಗಳನ್ನು ನೀವು ಮನೋಗತ ಮಾಡಿಕೊಂಡಿದ್ದರೆ ಇದು ಏಕೆ ಅಸಾಧ್ಯ  ಎಂಬುದನ್ನು ನೀವು ವಿವರಿಸಬಲ್ಲಿರಿ.

೨. ಕೆಳಅಂಚು ಮುಂಚಾಚಿಕೊಂಡಿರದ ಗೋಡೆಗೆ ಹಿಮ್ಮಡಿಯೂ ತಾಗುವಂತೆ ನೆಟ್ಟಗೆ ಒರಗಿ ನಿಂತು (ಚಿತ್ರ ೨) ಮೊಣಕಾಲನ್ನು ಒಂದಿನಿತೂ ಮಡಚದೇ ಮುಂದಕ್ಕೆ ಬಾಗಿ ನೆಲದಲ್ಲಿರುವ ವಸ್ತುವನ್ನು ಹೆಕ್ಕಲು ಪ್ರಯತ್ನಿಸಿ. ಸ್ಥಿರ ಸಮಭಾರಸ್ಥಿತಿಯ (ಸ್ಟೇಬಲ್ ಇಕ್ವಿಲಿಬ್ರಿಯಮ್) ವೈಷಿಷ್ಟ್ಯಗಳನ್ನು ನೀವು ಮನೋಗತ ಮಾಡಿಕೊಂಡಿದ್ದರೆ ಇದೂ ಏಕೆ ಅಸಾಧ್ತ ಎಂಬುದನ್ನು ನೀವು ವಿವರಿಸಬಲ್ಲಿರಿ.

೩. ಕಾಗದದ ಆಯಾಕಾರದ ಪಟ್ಟಿಯೊಂದನ್ನು ತಯಾರಿಸಿ. (ಅಳತೆ, ನಿಮಗಿಷ್ಟವಾದಷ್ಟು) ಪಟ್ಟಿಯ ಎರಡು ಅಂಚುಗಳಿಂದ ಸಮದೂರದಲ್ಲಿ ಸಮ ಉದ್ದಕ್ಕೆ ಪಟ್ಟಿಯನ್ನು ಚಿತ್ರ ೩ ರಲ್ಲಿ ತೋರಿಸಿದಂತೆ ಕತ್ತರಿಸಿ. ತದನಂತರ ಕಾಗದದ ಎರಡು ತುದಿಗಳನ್ನು ನಿಮ್ಮ ಒಂದೊಂದು ಕೈನಲ್ಲಿ ಹಿಡಿದುಕೊಂಡು ಎಳೆದು ಕಾಗದವನ್ನು ಮೂರು ಭಾಗಗಳಾಗಿ ತುಂಡರಿಸಲು ಪ್ರಯತ್ನಿಸಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.

೪. ಒಂದು ಅಳತೆ ಪಟ್ಟಿಯನ್ನು ನಿಮ್ಮ ಎರಡು ತೋರು ಬೆರಳುಗಳ ಮೇಲೆ ಚಿತ್ರ ೪ ರಲ್ಲಿ ತೋರಿಸಿದಂತೆ ಇಟ್ಟುಕೊಳ್ಳಿ. ಏಕಕಾಲದಲ್ಲಿ ಎರಡೂ ಬೆರಳುಗಳನ್ನು ಅಳತೆ ಪಟ್ಟಿಯ ಮಧ್ಯಭಾಗದತ್ತ ಜರುಗಿಸಲು ಪ್ರಯತ್ನಿಸಿ. ಒಂದಾದ ನಂತರ ಒಂದರಂತೆ ಬೆರಳುಗಳನ್ನು ಜರುಗಿಸಕೂಡದು ಎಂಬುದನ್ನು ಮರೆಯದಿರಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.

೫. ಒಂದು ಮೋಂಬತ್ತಿಯನ್ನು ಉರಿಸಿ ಮೇಜಿನ ಮೇಲೆ ನಿಲ್ಲಿಸಿ. ಚಿತ್ರ ೫ ರಲ್ಲಿ ತೋರಿಸಿದಂತೆ ಆಲಿಕೆಯ ಬಾಯಿಯ ಕೇಂದ್ರಭಾಗದಲ್ಲಿ ಮೋಂಬತ್ತಿಯ ಜ್ವಾಲೆ ಸರಿಸುಮಾರಾಗಿ ಇರುವಂತೆ ಆಲಿಕೆಯನ್ನು ಹಿಡಿದುಕೊಂಡು ಅದರ ಕೊಳವೆಯ ಮೂಲಕ ಗಾಳಿ ಊದಿ ಮೋಬತ್ತಿಯನ್ನು ನಂದಿಸಲು ಪ್ರಯತ್ನಿಸಿ. ಇದೂ ಅಸಾಧ್ಯ. ಏಕೆ ಎಂಬುದನ್ನು ನೀವೇ ತರ್ಕಿಸಿ.

Posted in ವಿಜ್ಞಾನ - ಮಾಡಿ ಕಲಿ | Leave a comment

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೭

ಮೋಜಿನ ಸವಾಲುಗಳು ೧. ಎರಡು ಬೆಂಕಿಪೆಟ್ಟಿಗೆಗಳು ಮತ್ತು ಯಾವುದಾದರೂ ನಾಣ್ಯ ಇವಿಷ್ಟು ಇದ್ದರೆ ಈ ಚಟುವಟಿಕೆ ಮಾಡಬಹುದು. ನಾಣ್ಯದ ಮೇಲೆ ಒಂದು ಬೆಂಕಿಕಡ್ಡಿಯನ್ನು ಬೆಂಕಿಪೆಟ್ಟಿಗೆಗೆ ಸಿಕ್ಕಿಸಿದ ಇನ್ನೊಂದು ಬೆಂಕಿಕಡ್ಡಿಯ ನೆರವಿನಿಂದ ಚಿತ್ರ ೧ ರಲ್ಲಿ ತೋರಿಸಿದಂತೆ ನಿಲ್ಲಿಸಿ. ಬೆಂಕಿಕಡ್ಡಿಗಳ ಉರಿಯುವ ಮದ್ದಿನ ಭಾಗ ಒಂದಕ್ಕೊಂದು ತಾಗಿಕೊಂಡಿರುವುದನ್ನು ಗಮನಿಸಿ. ನಾಣ್ಯದ ಮೇಲಿರುವ ಬೆಂಕಿಕಡ್ಡಿಯನ್ನು ಮುಟ್ಟದೆ ಮತ್ತು ಬೀಳಿಸದೆ ಗಾಳಿ, ನೀರು ಮತ್ತು ಬೆಂಕಿ ಈ ಮೂರರ ಪೈಕಿ ಯಾವುದಾದರೂ ಒಂದರ ನೆರವಿನಿಂದ ನಾಣ್ಯವನ್ನು ಎಳೆದು ತೆಗಯಿರಿ.   ೨. ಚಿತ್ರ ೨ ರಲ್ಲಿ ತೋರಿಸಿದಂತೆ ಕಾಗದದ ಒಂದು ಚಿಕ್ಕ ಪಟ್ಟಿಯನ್ನು ಮಡಚಿ ಅದರಲ್ಲಿ ತೋರಿಸಿದಂತೆ ‘ಪೇಪರ್ ಕ್ಲಿಪ್’ಗಳನ್ನು ಹಾಕಿ. ಪಟ್ಟಿಯ ಎರಡೂ ತುದಿಗಳನ್ನು ಬಾಣದ ಗುರುತಿನಿಂದ ತೋರಿಸಿದತ್ತ, ಅರ್ಥಾತ್ ವಿರುದ್ಧ ದಿಕ್ಕುಗಳತ್ತ ಬಲು ನಿಧಾನವಾಗಿ ಎಳೆಯಿರಿ. ನೀವು ಕಾಗದದ ತುದಿಗಳನ್ನು ಎಳೆಯುತ್ತಿರುವಾಗ ‘ಪೇಪರ್ ಕ್ಲಿಪ್’ಗಳು ಒಂದನ್ನೊಂದು ಸಮೀಪಿಸುವುದನ್ನು ಗಮನಿಸಿ. ‘ಪೇಪರ್ ಕ್ಲಿಪ್’ಗಳು ಒಂದನ್ನೊಂದು ಸ್ಪರ್ಶಿಸುವ ತನಕ ಎಳೆಯುತ್ತಿರಿ. ಈ ಪ್ರಕ್ರಿಯೆಯಲ್ಲಿ ಅವು ಓರೆಯಾಗದಂತೆಯೂ ಜಾರಿ ಬಿದ್ದು ಹೋಗದಂತೆಯೂ ಎಚ್ಚರಿಕೆ ವಹಿಸಿ, ‘ಕ್ಲಿಪ್’ಗಳು ಒಂದನ್ನೊಂದು ಸ್ಪರ್ಶಿಸಿದ ನಂತರ ಕಾಗದದ ತುದಿಗಳನ್ನು ಬಲು ಜೋರಾಗಿ ಎಳೆದರೆ ಅವು ಕಾಗದದಿಂದ ಜಾರಿ ಎಷ್ಟು ದೂರ ಹಾರಬಹುದು ಎಂಬುದನ್ನು ಊಹಿಸಿ. ನಿಮ್ಮ ಊಹೆ ಸರಿಯೇ ಎಂಬುದನ್ನು ಪ್ರಯೋಗ ಮಾಡಿ ಪರೀಕ್ಷಿಸಿ. ನೀವು ಊಹಿಸದೇ ಇದ್ದ ವೈಚತ್ರ್ಯವೊಂದನ್ನು ನೋಡುವಿರಿ.

೩. ಈ ಚಟುವಟಿಕೆಯನ್ನು ನಿಮ್ಮ ಮಿತ್ರನೊಬ್ಬನ ಜೊತೆಗೂಡಿಯೇ ಮಾಡಬೇಕು. ಚಿತ್ರ ೩ ರಲ್ಲಿ ತೋರಿಸಿದಂತೆ ನಿಮ್ಮ ಎರಡೂ ಕೈಗಳಿಗೆ ಕೈಕೋಳದೋಪಾದಿಯಲ್ಲಿ ಹಗ್ಗವೊಂದನ್ನು ಕಟ್ಟಿಕೊಳ್ಳಿ. ನಿಮ್ಮ ಮಿತ್ರನ ಕೈಗಳಿಗೂ ಇದೇ ರೀತಿಯಲ್ಲಿ ಹಗ್ಗದ ಕೈಕೋ: ತೊಡಿಸಬೇಕು. ತೊಡಿಸುವಾಗ ಆತನ ಒಂದು ಕೈಕೋಳದಿಂದ ಆರಂಭವಾದ ಹಗ್ಗ ನಿಮ್ಮ ಎರಡೂ ಕೈಕೋಳಗಳ ನಡುವಿನ ಹಗ್ಗದೊಳಕ್ಕಾಗಿ ಹಾಯ್ದು ಹೋಗಬೇಕು. ಯಾರದಾದರೂ ಒಬ್ಬರ ಕೈಕೋಳವನ್ನು ಬಿಚ್ಚದೆಯೇ ನೀವಿಬ್ಬರೂ ಬೇರೆಬೇರೆ ಆಗಲು ಸಾಧ್ಯವಿಲ್ಲದಂತೆ ಮಾಡಿದ ತಂತ್ರ ಇದು. ಯಾರೊಬ್ಬರ ಕೈಕೋಳವನ್ನು ಬಿಚ್ಚದೆಯೇ ಅಥವ ಕೈಗಳಿಂದ ಜಾರಿಸದೆಯೇ ಮತ್ತು  ಯಾರ ಹಗ್ಗವನ್ನೂ ತುಂಡರಿಸದೆಯೇ ಇಬ್ಬರೂ ಬೇರೆಬೇರೆ ಆಗುವ ತಂತ್ರ ರೂಪಿಸಬಲ್ಲಿರಾ?

೪. ಒಂದು ಬೆಲೂನಿಗೆ ಗಾಳಿ ತುಂಬಿಸಿ ಬೆಲೂನು ಒಡೆಯದಂತೆ ಸೂಜಿಯಿಂದ ಚುಚ್ಚಬಲ್ಲಿರಾ? ಹೀಗೆ ಚುಚ್ಚಲು ಸಾಧ್ಯ. ಚುಚ್ಚಿದ ಸೂಜಿಯನ್ನು ಬೆಲೂನಿನಿಂದ ಹೊರಗೆಳೆಯದಿದ್ದರಾಯಿತು ಅಂದರೆ ನಂಬುವಿರಾ? ನಂಬಲೇ ಬೇಕು? ಇದು ಹೇಗೆ ಸಾಧ್ಯ ಆಲೋಚಿಸಿ.

ಮಾಡುವುದು ಹೇಗೆ?

೧. ಇನ್ನೊಂದು ಉರಿಯುತ್ತಿರುವ ಕಡ್ಡಿಯಿಂದ ಬೆಂಕಿಕಡ್ಡಿಗಳ ಉರಿಯುವ ಮದ್ದಿನ ಭಾಗ ಒಂದಕ್ಕೊಂದು ತಾಗಿಕೊಂಡಿರುವ ಭಾಗವನ್ನು ಉರಿಸಿ ಅದು ಪೂರ್ತಿ ಉರಿದು ಭಸ್ಮವಾಗುವುದರೊಳಗೆ ಗಾಳಿ ಊದಿ ನಂದಿಸಿ.

೨. ಸರಿಯಾಗಿ ಮಾಡಿದರೆ ಎರಡು ಕ್ಲಿಪ್ಗಳು ಒಂದಕ್ಕೊಂದು ಹೆಣೆದುಕೊಂಡು ಒಂದೇ ’ಕ್ಲಿಪ್’ನಂತೆ ಹಾರುತ್ತದೆ. ಇದೇ ವೈಚಿತ್ರ್ಯ.

೩. ಈ ಮುಂದಿನ ಚಿತ್ರಗಳು ಸುಳಿವು ನಿಡುತ್ತವೆ, ಅವನ್ನು ಅಭ್ಯಸಿಸಿ ಪ್ರಯೋಗ ಮಾಡಿ.

೪. ಬೆಲೂನಿನ ಮೇಲ್ಮೈನ ಮೇಲೆ ಪಾರಕ  ಅಂಟುಟೇಪಿನ (ಸೆಲಫೇನ್) ಚಿಕ್ಕ ತುಂಡೊಂದನ್ನ ಅಂಟಿಸಿ ಅದು ಇರುವ ಸ್ಥಳದಲ್ಲಿ ಜೋರಾಗಿ ಸೂಜಿ ಚುಚ್ಚಿ ರಂಧ್ರ ಮಾಡಿ ಸೂಜಿಯನ್ನು ರಂಧ್ರದಲ್ಲಿಯೇ ಬಿಡಿ. ಸೂಜಿಯನ್ನು ತುಸು ಎತ್ತರದಲ್ಲಿ ಹಿಡಿದು ಮೊದಲನೇ ಸಲವೇ ರಂಧ್ರವಾಗುವಂತೆ ವೇಗವಾಗಿ ಚುಚ್ಚಬೇಕು.

Posted in ವಿಜ್ಞಾನ - ಮಾಡಿ ಕಲಿ | Tagged | Leave a comment

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೬

ನೀರಿನಿಂದ ಪಟಾಕಿ

ಹೈಡ್ರೊಜನ್ನಿನ ಎರಡು ಮತ್ತು ಆಕ್ಸಿಜನ್ನಿನ ಒಂದು ಪರಮಾಣುಗಳ ಸಂಯೋಗದ ಉತ್ಪನ್ನವೇ ನೀರಿನ ಒಂದು ಅಣು ಎಂಬುದೂ ನೀರನ್ನು ವಿದ್ಯುದ್ವಿಭಜಿಸಿ ೨:೧ ಅನುಪಾತದಲ್ಲಿ ಹೈಡ್ರೊಜನ್ ಮತ್ತು ಆಕ್ಸಿಜನ್ನುಗಳನ್ನು ಪಡೆಯಬಹುದು ಎಂಬುದೂ ನಿಮಗೆ ತಿಳಿದಿದೆ. ಈ ತಥ್ಯಗಳನ್ನು ಆಧರಿಸಿದ ಕುತೂಹಲಕಾರೀ ಪ್ರಯೋಗ ಇಂತಿದೆ:

ಪ್ಲಾಸ್ಟಿಕ್ಕಿನ ತಿರುಪು ಮುಚ್ಚಳ ಉಳ್ಳ ಅಗಲ ಬಾಯಿಯ ಒಂದು ಪುಟ್ಟ ವಾಯು ಅಭೇದ್ಯ ಬಾಟಲ್ (ಗಾಜಿನದ್ದು ಅಥವ ಪಾರಕ ಪ್ಲಾಸ್ಟಿಕ್ಕಿನದ್ದು-ಒಳಗೆ ಏನು ಜರಗುತ್ತದೆ ಎಂಬುದನ್ನು ನೋಡಲು ಅನುಕೂಲವಾಗಲಿ ಎಂಬ ಕಾರಣಕ್ಕಾಗಿ- ಚಿತ್ರ ೧), ಸಾಮಾನ್ಯ ಬಾಲ್ ಪಾಇಂಟ್ ಪೆನ್ನಿನ ಸ್ವಚ್ಛವಾಗಿರುವ ಒಂದು ರೀಫಿಲ್ ಕೊಳವೆ, ಸೀಸದ ಸುಮಾರು ೧ ಮೀ ಉದ್ದದ ವಾಲ್ ಟ್ಯೂಬ್ (ಸೈಕಲ್ಲಿನದ್ದು), ೧ ಸೆಂಮೀ ಅಗಲ ಮತ್ತು ಬಾಟಲಿನ ಉದ್ದಕ್ಕಿಂತ ತುಸು ಕಡಿಮೆ ಉದ್ದದ ಎರಡು ತಗಡುಗಳು (ಬೆಸುಗೆ ಹಾಕುವ ಅಂಗಡಿಗಳಲ್ಲಿ ಸಿಕ್ಕುವ ಸೀಸಗಟ್ಟಿಯನ್ನು ಸುತ್ತಿಗೆಯಿಂದ ತಟ್ಟಿ ಇವನ್ನು ತಯಾರಿಸ ಬಹುದು. ಬೇರೆ ಲೋಹಗಳನ್ನು ಉಪಯೋಗಿಸಿದರೆ ಸ್ವಲ್ಪ ಕಾಲಾನಂತರ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ), ವಿದ್ಯುದ್ವಾಹಕ ತಂತಿ, ಟಾರ್ಚ್ ಲೈಟುಗಳಲ್ಲಿ ಉಪಯೋಗಿಸುವ ಎರಡು ಶುಷ್ಕ ಕೋಶಗಳು, ರಬ್ಬರ್ ಬ್ಯಾಂಡ್ ಗಳು, ಅಂಟುಟೇಪ್, ಜೇನು ಮೇಣ, ಪಟಿಕ (ಆಲಮ್), ಕಾರಿನ ಚಕ್ರದ ನಿರುಪಯುಕ್ತ ಟ್ಯೂಬ್ (ಬಾಟಲಿನ ಬಾಯಿ ತುಸು ಚಿಕ್ಕದಾಗಿದ್ದರೆ ಸೈಕಲ್ ಟ್ಯೂಬೂ ಆದೀತು) – ಇವಿಷ್ಟನ್ನು ಸಂಗ್ರಹಿಸಿ.

ಪ್ರಯೋಗದ ಯಶಸ್ಸು ಬಲುಮಟ್ಟಿಗೆ ಬಾಟಲಿನ ವಾಯು ಅಭೇದ್ಯತೆಯನ್ನು ಅವಲಂಬಿಸಿದೆ. ನೀವು ಸಂಗ್ರಹಿಸಿದ ಬಾಟಲ್ ಅನ್ನು ವಾಯು ಅಭೇದ್ಯವಾಗಿಸಲು ಮತ್ತು ಪ್ರಯೋಗ ಮಾಡಲು ನೀವು ಮಾಡಬೇಕಾದದ್ದು ಇಂತಿದೆ:

೧. ತಿರುಪು ಮುಚ್ಚಳದ ಒಳಗೆ ಕರಾರುವಾಕ್ಕಾಗಿ ಅಳವಡಿಸಬಹುದಾದ ಉಂಗುರಾಕಾರದ ರಬ್ಬರ್ ‘ವಾಷರು’ ಒಂದನ್ನು ನೀವು ಸಂಗ್ರಹಿಸಿದ ಟ್ಯೂಬ್ ನಿಂದ ತಯಾರಿಸಿ. ಇದನ್ನು ಮುಚ್ಚಳದಲ್ಲಿ ಅಳವಡಿಸಿದಾಗ ಒಂದಿನಿತೂ ಸುಕ್ಕು ಇರಕೂಡದು. ವಾಷರು ಬಾಟಲ್ಲಿನ ಬಾಯಿಯ ಹೊರ ಅಂಚಿಗೆ ಕರಾರುವಾಕ್ಕಾಗಿ ಹೊಂದಾಣಿಕೆ ಆದರೆ ಮಾತ್ರ ಇದು ಸಾಧ್ಯ (ಚಿತ್ರ ೨)

೨. ತದನಂತರ ವಾಷರು ಅಳವಡಿಸಿದ ಮುಚ್ಚಳದ ಮಧ್ಯ ಭಾಗದಲ್ಲಿ ರೀಫಿಲ್ ಕೊಳವೆಯನ್ನು ಬಿಗಿಯಾಗಿ ತೂರಿಸಬಹುದಾದ ಒಂದು ಚಿಕ್ಕ ರಂಧ್ರವನ್ನೂ ಅದರ ಇಕ್ಕೆಲಗಳಲ್ಲಿ ಸೀಸದ ತಗಡುಗಳನ್ನು ಬಿಗಿಯಾಗಿ ತೂರಿಸಿ ನಿಲ್ಲಿಸಬಹುದಾದ ಒಂದೊಂದು ಸೀಳನ್ನೂ ಮಾಡಿ. ರೀಫಿಲ್ ಕೊಳವೆ ಮತ್ತು ಸೀಸದ ತಗಡುಗಳನ್ನು ಚಿತ್ರದಲ್ಲಿ ತೋರಿಸಿದಂತೆ ವಾಷರು ಇರುವ ಮುಚ್ಚಳಕ್ಕೆ ಜೋಡಿಸಿ (ಚಿತ್ರ ೩).

ಮುಚ್ಚಳದ ಒಳಗಿರುವ ರೀಫಿಲ್ ಕೊಳವೆಯ ತುದಿ ಮುಚ್ಚಳದ ಸಮೀಪದಲ್ಲಿಯೂ ಸೀಸದ ತಗಡುಗಳ ಕೆಳತುದಿಗಳು ಸಾಪೇಕ್ಷವಾಗಿ ದೂರದಲ್ಲಿಯೂ ಇರುವುದನ್ನು ಗಮನಿಸಿ.

೩. ರೀಫಿಲ್ ಕೊಳವೆಯ ಹೊರತುದಿಗೆ ವಾಲ್-ಟ್ಯೂಬನ್ನೂ ಸೀಸದ ತಗಡುಗಳಿಗೆ ವಿದ್ಯುದ್ವಾಹಕ ತಂತಿಗಳನ್ನೂ ಜೋಡಿಸಿ.

೪. ತದನಂತರ ರೀಫಿಲ್ ಕೊಳವೆ ಮತ್ತು ಸೀಸದ ತಗಡುಗಳನ್ನು ಮುಚ್ಚಳದಲ್ಲಿ ತೂರಿಸಿದ ರಂಧ್ರಗಳು ವಾಯು ಅಭೇದ್ಯವಾಗುವಂತೆ ಜೇನುಮೇಣ (ಅರಗೂ ಆದೀತು) ಕರಗಿಸಿ ಮೆತ್ತಿ. ಹೀಗೆ ಸಜ್ಜುಗೊಳಿಸಿದ ಮುಚ್ಚಳವನ್ನು ೧೦ ನಿಮಿಷ ಕಾಲ ಒಂದೆಡೆ ಇಡಿ.

೫. ಇಷ್ಟು ಸಿದ್ಧತೆ ಆದ ನಂತರ ಮುಚ್ಚಳವನ್ನು ಬಾಟಲಿಗೆ ಬಿಗಿಯಾಗಿ ಹಾಕಿ ಅದು ನಿಜವಾಗಿಯೂ ವಾಯು ಅಭೇದ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಬಾಟಲನ್ನು ನೀರಿನಲ್ಲಿ ಮುಳುಗಿಸಿ ಹಿಡಿದು ವಾಲ್ ಟ್ಯೂಬಿನ ಮೂಲಕ ಗಾಳಿ ಊದಿ (ಚಿತ್ರ ೪). ಬಾಟಲ್ ಮತ್ತು ಮುಚ್ಚಳದ ಯಾವುದೇ ಭಾಗದಿಂದ ಒಂದೇ ಒಂದು ವಾಯುವಿನ ಗುಳ್ಳೆಯೂ ಹೊರಬರದಿದ್ದರೆ ಅದು ವಾಯು ಅಭೇದ್ಯವಾಗಿದೆ. ಆಗಿರದಿದ್ದರೆ ಯುಕ್ತ ಪರಿಹಾರೋಪಾಯ ನೀವೇ ಪತ್ತೆ ಹಚ್ಚಿ. ವಾಯು ಅಭೇದ್ಯವಾಗದೇ ಇದ್ದರೆ ಪ್ರಯೋಗ ನಿರೀಕ್ಷಿತ ಫಲ ನೀಡುವುದಿಲ್ಲ.

೬. ತದನಂತರ ಬಾಟಲಿನಲ್ಲಿ ಮುಕ್ಕಾಲು ಭಾಗದಷ್ಟು ತುಸು ಪಟಿಕ ಲೀನಿಸಿದ ನೀರು ತುಂಬಿಸಿ ಮುಚ್ಚಳ ಬಿಗಿಯಾಗಿ ಹಾಕಿ. ಪಟಿಕಯುತ ನೀರು ದೀರ್ಘಕಾಲ ಕೆಡುವುದೂ ಇಲ್ಲ, ಸೀಸದ ಮೇಲೆ ರಾಸಾಯನಿಕ ಕ್ಚಿಯೆ ನಡೆಸುವುದೂ ಇಲ್ಲ. ದುಬಾರಿಯೂ ಅಲ್ಲ. ಎಂದೇ ಇದನ್ನು ಉಪಯೋಗಿಸುವುದು ಅತ್ಯುತ್ತಮ. ರೀಫಿಲ್ ಕೊಳವೆಯ ತುದಿ, ನೀರಿನಲ್ಲಿ ಮುಳುಗಿರಬಾರದು, ಸೀಸದ ತಗಡುಗಳು ಮುಳುಗಿರಬೇಕು ಎಂಬುದನ್ನು ಮರೆಯದಿರಿ (ಚಿತ್ರ ೫). 

೭. ಒಂದು ಬಟ್ಟಲಿನಲ್ಲಿ ಸ್ವಲ್ಪ ಸಾಬೂನು ಲೀನಿಸಿದ ನೀರು ಹಾಕಿ ನೀವು ತಯಾರಿಸಿದ ಉಪಕರಣದಿಂದ ತುಸು ದೂರದಲ್ಲಿ ಇಡಿ. ಸೀಸದ ತಗಡಿಗೆ ಜೋಡಿಸಿದ ವಿದ್ಯುದ್ವಾಹಕ ತಂತಿಗಳನ್ನು ರಬ್ಬರ್ ಬ್ಯಾಡ್ ಮತ್ತು ಅಂಟುಟೇಪಿನ ನೆರವಿನಿಂದ ಶುಷ್ಕಕೋಶಗಳಿಗೆ ಜೋಡಿಸಿ (ಚಿತ್ರ ೫). ಬಾಟಲಿನೊಳಗೆ ನೀರಿನಲ್ಲಿ ಉಳುಗಿರುವ ಸೀಸದ ತಗಡುಗಳ ಬಳಿ ಗುಳ್ಳೆಗಳು ಉತ್ಪತ್ತಿಯಾಗಿ ಮೇಲೇರುವುದನ್ನು ವೀಕ್ಷಿಸಿ. ಒಂದೆರಡು ನಿಮಿಷಗಳ ನಂತರ ವಾಲ್ ಟ್ಯೂಬಿನ ತುದಿಯನ್ನು ಬಟ್ಟಲಿನಲ್ಲಿರುವ ಸಾಬೂನು ನೀರಿನಲ್ಲಿ ಮುಳುಗಿಸಿ ಹಿಡಿಯಿರಿ. ಅದರಿಂದ ಗುಳ್ಳೆಗಳು ಹೊರಬಂದು ನೀರಿನ ಮೇಲ್ಮೈ ಮೇಲೆ ಒತ್ತೊತ್ತಾಗಿ ನಿಲ್ಲುವುದನ್ನು ವೀಕ್ಷಿಸಿ. ಸುಮಾರು ೧೦-೨೦ ಗುಳ್ಳೆಗಳು ಸಂಗ್ರಹವಾದ ನಂತರ ವಾಲ್ ಟ್ಯೂಬಿನ ತುದಿಯನ್ನು ಹೊರತೆಗೆದು ನೀರಿನ ಬಟ್ಟಲಿನಿಂದ ತುಸು ದೂರದಲ್ಲಿ ಇಡಿ (ಇದು ಬಲು ಮುಖ್ಯ). ತದನಂತರ ಉರಿಯುತ್ತಿರುವ ಬೆಂಕಿಕಡ್ಡಿ ಅಥವ ಊದುಕಡ್ಡಿಯನ್ನು (ಗಂಧದ ಕಡ್ಡಿ) ನೀರಿನ ಮೇಲಿರುವ ಗುಳ್ಳೆಗಳಿಗೆ ಮುಟ್ಟಿಸಿ. ಗುಳ್ಳೆಗಳು ಚಿಕ್ಕ ಪಟಾಕಿಯಂತೆ ಸ್ಫೋಟಿಸುವುದನ್ನು ವೀಕ್ಷಿಸಿ. ಪ್ರಯೋಗವನ್ನು ಎಷ್ಟು ಬಾರಿ ಬೇಕಾದರೂ ಪುನರಾವರ್ತಿಸಬಹುದು. ಪ್ರತೀಬಾರಿಯೂ ಗುಳ್ಳೆಗಳಿಗೆ ಬೆಂಕಿ ಮುಟ್ಟಿಸುವಾಗ ವಾಲ್ ಟ್ಯೂಬಿನ ತುದಿ ದೂರದಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳಿ. ವಾಲ್ ಟ್ಯೂಬಿನ ತುದಿಯ ಹತ್ತಿರ ಮರೆತು ಗಂಧದ ಕಡ್ಡಿ ಹಿಡಿದರೆ ಬಾಟಲ್ ಸ್ಫೋಟಿಸಿ ಹಾನಿಯಾದೀತು, ಜೋಕೆ. ನಿಮಗೆ ಸಾಕೆನಿಸಿದಾಗ ವಿದ್ಯುತ್ ಸಂಪರ್ಕ ತಪ್ಪಿಸಿ. ಮುಂದೆ ಪ್ರಯೋಗ ಮಾಡಬೇಕೆನಿಸಿದಾಗಲೆಲ್ಲ ಸಂಪರ್ಕ ಏರ್ಪಡಿಸಿ ಪಟಾಕಿ ಸಿಡಿಸಿ. ಒಂದು ವಿದ್ಯುತ್ ಸ್ವಿಚ್ ಅನ್ನು ವಿದ್ಯುನ್ಮಂಡಲದಲ್ಲಿ ಅಳವಡಿಸಿದರೆ ಸಂಪರ್ಕ ಏರ್ಪಡಿಸುವುದು-ತುಂಡರಿಸುವುದು ಸುಲಭವಾಗುತ್ತದೆ.

ವಿದ್ಯುತ್ ಸಂಪರ್ಕ ಏರ್ಪಡಿಸಿದಾಗ ನೀರಿನಲ್ಲಿ ಉತ್ಪತ್ತಿಯಾದ ಅನಿಲಗಳು ಯಾವುವು? ಅವುಗಳ ಮಿಶ್ರಣ ಭರಿತ ಗುಳ್ಳೆಗಳು ಸ್ಫೋಟಿಸಿದ್ದು ಏಕೆ ಎಂಬುದನ್ನು ಪತ್ತೆಹಚ್ಚಿ.

Posted in ವಿಜ್ಞಾನ - ಮಾಡಿ ಕಲಿ | Leave a comment

ಅಗೋಚರತೆ (ಇನ್ವಿಸಿಬಿಲಿಟಿ)

ಮಿಸ್ಟರ್ ಇಂಡಿಯ, ಹ್ಯಾರಿ ಪಾಟ್ಟರ್, ಟಾಮ್ ಅಂಡ್ ಜೆರ್ರಿ ಇವೇ ಮೊದಲಾದ ಕೆಲವು ಚಲನಚಿತ್ರಗಳಲ್ಲಿ ಏನೋ ಒಂದು ದ್ರಾವಣ ಕುಡಿಯುವುದರಿಂದಲೋ, ಒಂದು ವಿಶಿಷ್ಟ ಮೇಲಂಗಿ ಅಥವ ಹೊದಿಕೆಯನ್ನು ಧರಿಸುವುದರಿಂದಲೋ, ಉಂಗುರವೊಂದನ್ನು ವಿಶಿಷ್ಟ ರೀತಿಯಲ್ಲಿ ಹಾಕಿಕೊಳ್ಳುವುದರಿಂದಲೋ ತಮಗೆ ಬೇಕೆನಿಸಿದಾಗ ಅದೃಶ್ಯರಾಗುವ ಪಾತ್ರಗಳನ್ನು ನೀವು ಗಮನಿಸಿರುತ್ತೀರಿ. ಬೇಕೆನಿಸಿದಾಗ ಅದೃಶ್ಯವಾಗುವುದು, ಅರ್ಥಾತ್ ಅಗೋಚರತೆ ಸಾಧನೀಯವೇ?

ಅಪಾರದರ್ಶಕ, ಅರ್ಥಾತ್ ಅಪಾರಕ ವಸ್ತುವಿನ ಮೇಲೆ ಬಿದ್ದ ಬೆಳಕಿನ ಕಿರಣಗಳು ಪ್ರತಿಫಲನಗೊಂಡು ನಮ್ಮ ಅಕ್ಷಿಪಟಲದ ಮೇಲೆ ಬಿಂಬವನ್ನು ಮೂಡಿಸಿದರೆ ಅದು ನಮಗೆ ಗೋಚರಿಸುತ್ತದೆ (ಚಿತ್ರ ೧). ಇದಕ್ಕೆ ಬದಲಾಗಿ ವಸ್ತು ತನ್ನ ಮೇಲೆ ಬಿದ್ದ ಬೆಳಕಿನ ಕಿರಣಗಳನ್ನು ಸಂಪೂರ್ಣವಾಗಿ ಹೀರಿಕೊಂಡರೆ ಏನಾಗುತ್ತದೆ ಊಹಿಸಬಲ್ಲಿರಾ? ಶಾಸ್ತ್ರ ರೀತ್ಯಾ ಆ ವಸ್ತು ನಮಗೆ ಗೋಚರಿಸಕೂಡದಾದರೂ ಅದರ ಆಸುಪಾಸಿನ ಎಲ್ಲ ವಸ್ತುಗಳೂ ನಮಗೆ ಗೋಚರಿಸುವುದರಿಂದ ಆ ವಸ್ತು ಎಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದೆಯೋ ಅಷ್ಟು ಸ್ಥಳ ಕಪ್ಪಾಗಿ ಗೋಚರಿಸುತ್ತದೆ! ಅದರ ಹಿಂದೆ ಏನಿದೆಯೋ ಅದು ನಮಗೆ ಗೋಚರಿಸುವುದಿಲ್ಲ (ಚಿತ್ರ ೨). ತತ್ಪರಿಣಾಮವಾಗಿ, ಆ ವಸ್ತುವಿನ ಸ್ವರೂಪ ನಮಗೆ ಗೋಚರಿಸದೇ ಇದ್ದರೂ ಅಲ್ಲಿ ಏನೋ ಒಂದು ಇದೆ ಎಂಬುದು ತಿಳಿಯುತ್ತದೆ. ಪರಿಪೂರ್ಣ ಅಗೋಚರತೆ ಆಗಬೇಕಾದರೆ ವಸ್ತು ನಮಗೆ ಗೋಚರಿಸ ಕೂಡದು, ಅದರ ಹಿಂದಿರುವ ವಸ್ತುಗಳು ನಮಗೆ ಗೋಚರಿಸಬೇಕು (ಚಿತ್ರ ೩). ವಸ್ತು ಯಾವದೋ ಒಂದು ತಂತ್ರದಿಂದ ಪಾರಕವಾದರೆ ಇಂತು ಆಗ ಬೇಕಲ್ಲವೇ? ಇಂತಾಗುವುದರಲ್ಲಿ ಒಂದು ಸಮಸ್ಯೆ ಇದೆ. ಈ ರೀತಿ ಅಗೋಚರವಾದ ವ್ಯಕ್ತಿಯ ಮೂಲಕ, (ಅಕ್ಷಿಪಟಲವೂ ಸೇರಿದಂತೆ ಪ್ರತಿಯೊಂದು ಅಂಗದ ಮೂಲಕ) ಬೆಳಕಿನ ಕಿರಣಗಳು ಹಾದು ಹೋಗುವುದರಿಂದ ಅವನಿಗೆ ಏನೂ ಕಾಣಿಸುವದಿಲ್ಲ. ಅರ್ಥಾತ್, ಆತ ಸಂಪೂರ್ಣ ಕುರುಡು ವ್ಯಕ್ತಿ ಆಗಲೇ ಬೇಕು!! ಇಂಥ ಅಗೋಚರತೆಯಿಂದ ಏನು ಲಾಭ?

ಅಗೋಚರತೆಯನ್ನು ಸಾಧಿಸ ಬಹುದಾದ ಇನ್ನೊಂದು ತಂತ್ರವಿದೆ. ಆದರೆ, ಇದನ್ನು ಸಾಧ್ಯವಾಗಿಸಬಲ್ಲಿರಾದರೆ ನೀವು ಕುಬೇರರು ಆಗುವುದು ಖಚಿತ. ಒಂದು ಹೊದಿಕೆಯನ್ನು ನೀವು ಸೃಷ್ಟಿಸ ಬೇಕು. ಆ ಹೊದಿಕೆಯ ಮೇಲೆ ಬಿದ್ದ ಬೆಳಕಿನ ಕಿರಣಗಳು ಬಾಗಿ ಅದರ ಹೊರಮೈಗುಂಟ ಚಲಿಸಿ ಅದನ್ನು ಬಳಸಿ ದಾಟಿದ ಬಳಿಕ ಅದು ಇಲ್ಲದೇ ಇದ್ದರೆ ಯಾವ ಪಥದಲ್ಲಿ ಚಲಿಸುತ್ತಿತ್ತೋ ಅದೇ ಪಥದಲ್ಲಿ ಚಲಿಸುವಂತಾಗ ಬೇಕು(ಚಿತ್ರ ೪)!!!

ಇಂಥದ್ದೊಂದು ವಸ್ತುವನ್ನು ಶೋಧಿಸಲು ಕೆಲವು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆಂಬ ವರದಿಗಳೂ ಇವೆ. ಅವರು ಯಶಸ್ವಿಗಳಾದರೆ ಏನಾಗಬಹುದೆಂಬುದನ್ನು ಊಹಿಸಿ. ಅವರಿಗೆ ಯಶಸ್ಸು ಸಿಕ್ಕದಿರಲಿ ಎಂದು ಆಶಿಸೋಣವೇ?

Posted in ಹಾಗೇ ಸುಮ್ಮನೆ | Tagged , , , , | Leave a comment

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೫೫

ಸಂವೇಗ ಸಂರಕ್ಷಣ (ಕನ್ಸರ್ವೇಷನ್ ಆಫ್ ಮೊಮೆಂಟಮ್) ತತ್ವಾಧಾರಿತ ವಿದ್ಯಮಾನಗಳು

ಚಲನೆಯಲ್ಲಿ ಇರುವ ವಸ್ತುವಿನ ದ್ರವ್ಯರಾಶಿ (ಮಾಸ್) ಮತ್ತು ವೇಗಗಳ ಗುಣಲಬ್ಧವೇ ಆ ವಸ್ತುವಿನ ಸಂವೇಗ (ಮೊಮೆಂಟಮ್), ಬಾಹ್ಯ ಬಲಗಳ ಪ್ರಭಾವಕ್ಕೆ ಒಳಗಾಗದ ವಸ್ತುವ್ಯವಸ್ಥೆಯಲ್ಲಿ ವಸ್ತುಗಳ ಸಂವೇಗಗಳ ಮೊತ್ತ ಸ್ಥಿರವಾಗಿರುತ್ತದೆ – ಇದು ಸಂವೇಗ ಸಂರಕ್ಷಣ ತತ್ವದ ತಿರುಳು. ಮುಂದೆ ವರ್ಣಿಸಿರುವ ಎರಡು ಪ್ರಯೋಗಗಳು ಈ ತತ್ವದ ಸರಿಸುಮಾರಾದ ಪ್ರಾತ್ಯಕ್ಷಿಕೆಗಳು.

ಪ್ರಯೋಗ ೧. ಸಮ ತೂಕದ ಸಮ ಗಾತ್ರದ ೫ ಗೋಲಿಗಳು (ಕಬ್ಬಿಣದ್ದಾದರೆ ಉತ್ತಮ, ಲಭ್ಯವಿಲ್ಲದಿದ್ದರೆ ಗಾಜಿನವೂ ಆದೀತು), ಎರಡು ಉದ್ದನೆಯ ಪೆನ್ಸಿಲ್ಲುಗಳು ಅಥವ ತತ್ಸಮನಾದ ಕಡ್ಡಿಗಳು, ಸುಮಾರು ೧೫-೨೦ ಸೆಂಮೀ ಉದ್ದದ ಸುಲಭವಾಗಿ ತುಂಡಾಗದ ಸಪುರ ದಾರದ ೫ ತುಂಡುಗಲು – ಇವಿಷ್ಟನ್ನು ಸಂಗ್ರಹಿಸಿ.

ಅಂಟುಟೇಪಿನ ನೆರವಿನಿಂದ ಒಂದು ದಾರದ ತುಂಡಿನ ಮಧ್ಯಭಾಗಕ್ಕೆ ಒಂದು ಗೋಲಿಯಂತೆ ೫ ಗೋಲಿಗಳನ್ನು ೫ ದಾರದ ತುಂಡುಗಳಿಗೆ ದೃಢವಾಗಿ ಅಂಟಿಸಿ. ದಾರದ ಎರಡೂ ತುದಿಗಳನ್ನು ಎತ್ತಿ ಹಿಡಿದಾಗ ಸಾಮಾನ್ಯ ಲೋಲಕದಂತೆ ಗೋಲಿ ಆಂದೋಲಿಸುವಂತೆ ಇರಬೇಕು. ದಾರವನ್ನು ಗೋಲಿಗಳಿಗೆ ಅಂಟಿಸಲು ಉಪಯೋಗಿಸಿದ ಟೇಪ್ ತುಂಡುಗಳ ಉದ್ದ ಸಮವಾಗಿರಲಿ.

ಎರಡು ಪೆನ್ಸಿಲ್ಲುಗಳನ್ನು ಮೇಜಿನ ಮೇಲೆ ಯುಕ್ತ ದೂರದಲ್ಲಿ ಸಮಾಂತರವಾಗಿ ಇಡಿ. ಪ್ರತೀ ಗೋಲಿಯ ದಾರದ ಒಂದು ತುದಿಯನ್ನು ಒಂದಿ ಪೆನ್ಸಿಲ್ಲಿಗೂ ಇನ್ನೊಂದು ತುದಿಯನ್ನು ಇನ್ನೊಂದು ಪೆನ್ಸಿಲ್ಲಿಗೂ ಭದ್ರವಾಗಿ ಕಟ್ಟಿ (ಚಿತ್ರ ೧). ಕಟ್ಟಿದ ಬಳಿಕ ಎಲ್ಲ ಗೋಲಿಗಳ ಎರಡೂ ಪಾರ್ಶ್ವಗಳಲ್ಲಿ ಇರುವ ದಾರದ ಭಾಗಗಳ ಉದ್ದಗಳು ಸಮವಾಗಿರಲೇ ಬೇಕು.

ಪುಸ್ತಕಗಳ ಅಟ್ಟಿ ಅಥವ ಬೇರೆ ಯಾವುದಾದರೂ ಲಭ್ಯವಿರುವ ಆಧಾರಗಳ ಮೇಲೆ ಗೋಲಿಯುಕ್ತ ಪೆನ್ಸಿಲ್ಲುಗಳನ್ನು ಪ್ರತೀ ಗೋಲಿಯೂ ಸ್ವತಂತ್ರವಾಗಿ ಆಂದೋಲಿಸಲು ಸಾಧ್ಯವಾಗುವಂತೆ ಇಡಿ (ಚಿತ್ರ ೨). ತದನಂತರ ದಾರಗಳನ್ನು ಎಷ್ಟು ಬೇಕೋ ಅಷ್ಟು ಜರುಗಿಸಿ ಗೋಲಿಗಳು ಒಂದನ್ನೊಂದು ಸ್ಪರ್ಷಿಸುವಂತೆ ಸಜ್ಜುಗೊಳಿಸಿ. ಎಲ್ಲ ಗೋಲಿಗಳು ಒಂದನ್ನೊಂದು ಸ್ಪರ್ಷಿಸುತ್ತಿರುವುದನ್ನೂ ಏಕರೇಖಸ್ಥವಾಗಿರುವುದನ್ನೂ ಖಾತರಿ ಪಡಿಸಿಕೊಳ್ಳಿ.

ಏಕರೇಖಾಗತವಾಗಿರುವ ಐದು ಗೋಲಿಗಳ ಪೈಕಿ ಯಾವುದಾದರೂ ಒಂದು ತುದಿಯ ಗೋಲಿಯನ್ನು ಗೋಲಿಗಳ ಸರಣಿಯ ನೇರದಲ್ಲಿಯೇ ಹಿಂದಕ್ಕೆ ಎಳೆದು ಹಿಡಿದುಕೊಳ್ಳಿ. ಈ ರೀತಿ ಹಿಡಿದುಕೊಂಡಾಗ ಆ ಗೋಲಿಗೆ ಅಂಟಿಸಿದ ದಾರಗಳ ಎರಡೂ ಭಾಗಗಳು ಸಡಿಲವಾಗಿರಕೂಡದು. ಎಳೆದು ಹಿಡಿದಿದ್ದ ಗೋಲಿಯನ್ನು ಬಿಟ್ಟರೆ ಏನಾಗವಹುದು? ಅದು ಅದರ ನಂತರದ ಗೋಲಿಗೆ ಢಿಕ್ಕಿ ಹೊಡೆಯ ಬೇಕಲ್ಲವೇ? ಢಿಕ್ಕಿ ಹೊಡೆದ ನಂತರ ಏನಾಗಬಹುದು, ಊಹಿಸಿ. ಗೋಲಿಯನ್ನು ಬಿಟ್ಟು ನಿಮ್ಮ ೂಹೆ ಸರಿಯೇ ಎಂಬುದನ್ನು ಪರೀಕ್ಷಿಸಿ.

ಗೋಲಿಗಳ ಸರಣಿಯ ಇನ್ನೊಂದು ತುದಿಯ ಗೋಲಿ ಮುಂದಕ್ಕೆ ಚಿಮ್ಮುತ್ತದೆ ಎಂದು ನೀವು ಊಹಿಸಿದ್ದರೆ ಮಾತ್ರ ನಿಮ್ಮ ಊಹೆ ಸರಿ ಎಂದು ಸಾಬೀತಾಗುತ್ತದೆ. ಮುಂದಕ್ಕೆ ಚಿಮ್ಮಿದ ಗೋಲಿ ಏನು ಮಾಡುತ್ತದೆ ಮತ್ತು ಅದರ ಪರಿಣಾಮವೇನು ಎಂಬುದನ್ನು ವೀಕ್ಷಿಸಿ. ನೀವು ಗೋಲಿಯನ್ನು ಎಷ್ಟು ಹಿಂದಕ್ಕೆ ಎಳೆದಿದ್ದಿರೋ ಹೆಚ್ಚುಕಮ್ಮಿ ಅಷ್ಟೇ ದೂರಕ್ಕೆ ಇನ್ನಂದು ತುದಿಯ ಗೋಲಿ ಚಿಮ್ಮುವುದನ್ನು ಗಮನಿಸಿ. ಸ್ವಲ್ಪ ಕಾಲ ಈ ಎರಡು ಗೋಲಿಗಳು ಪರ್ಯಾಯವಾಗಿ ಚಿಮ್ಮುವುದನ್ನೂ ಚಿಮ್ಮುವ ದೂರ ಕ್ರಮೇಣ ಕಮ್ಮಿ ಆಗುವುದನ್ನೂ ಗಮನಿಸಿ.

ತದನಂತರ ಯಾವುದಾದರೂ ಒಂದು ತುದಿಯ ಎರಡು ಗೋಲಿಗಳನ್ನು ಒಟ್ಟಿಗೇ ಈ ಮೊದಲಿನಂತೆ ಎಳೆದು ಬಿಟ್ಟು ಪರಿಣಾಮಗಳನ್ನು ವೀಕ್ಷಿಸಿ. ಸಂವೇಗ ಸಂರಕ್ಷಣ ತತ್ವದ ನೆರವಿನಿಂದ ಈ ವಿದ್ಯಮಾನಗಳನ್ನು ವಿವರಿಸಲು ಪ್ರಯತ್ನಿಸಿ. ಈ ಪ್ರಯೋಗದಲ್ಲಿ ಸಂವೇಗ ಸಂರಕ್ಷಣ ತತ್ವ ಶೇಕಡಾ ೧೦೦ ರಷ್ಟು ಅನ್ವಯವಾಗದಿರಲು ಕಾರಣ ಊಹಿಸಿ.

ಪ್ರಯೋಗ ೨. ಸಮತೂಕದ, ಸಮ ಗಾತ್ರದ ೫ ಗೋಲಿಗಳು, ಇವಕ್ಕಿಂತ ತುಸು ದೊಡ್ಡದಾದ ಒಂದು ಗೋಲಿ, ಒಂದು ಉದ್ದನೆಯ ಪೆನ್ಸಿಲ್, ಒಂದು ದಪ್ಪಕಾಗದದ ಹಾಳೆ – ಇವಿಷ್ಟನ್ನು ಸಂಗ್ರಹಿಸಿ.

ಎರಡು ಗೋಲಿಗಳನ್ನು ಏಕಕಾಲದಲ್ಲಿ ಉರುಳಿಸಿದರೆ ಬಳುಕದಷ್ಟು ಗಟ್ಟಿಯಾದ, ದೊಡ್ಡ ಗೋಲಿ ಅತ್ತಿತ್ತ ಓಲಾಡದೆ ನೇರವಾಗಿಯೂ ಸರಾಗವಾಗಿಯೂ ಉರುಳಲು ಎಷ್ಟು ವ್ಯಾಸವಿರಬೇಕೋ ಅಷ್ಟು ವ್ಯಾಸದ ಕೊಳವೆಯನ್ನು ದಪ್ಪಕಾಗದದ ಹಾಳೆಯಿಂದ ತಯಾರಿಸಿ (ಚಿತ್ರ ೩). ಕೊಳವೆಯ ಒಂದು ತುದಿಯಿಂದ ಸುಮಾರು ೨-೩ ಗೋಲಿಗಳು ಇಡುವಷ್ಟು ಸ್ಥಳ ಬಿಟ್ಟು ಪೆನ್ಸಿಲನ್ನು ಸರಾಗವಾಗಿ ತೂರಿಸಿ ತೆಗೆಯಬಹುದಾದಷ್ಟು ದೊಡ್ಡ ರಂಧ್ರವೊಂದನ್ನು ಮಾಡಿ (ಚಿತ್ರ ೪). ಗೋಲಿ ಸರಾಗವಾಗಿ ಉರುಳಬಹುದಾದ ಪಥವೊಂದನ್ನು ದಪ್ಪ ಕಾಗದದ ಹಾಳೆಯಿಂದ ತಯಾರಿಸಿ. ನೀವು ತಯಾರಿಸಿದ ಕೊಳವೆ ಕರಾರುವಾಕ್ಕಾಗಿ ಹಿಡಿಯುವಷ್ಟು ಅಗಲದ ಪಥ ಇದಾಗಿರಲಿ (ಚಿತ್ರ ೫).

ಪುಸ್ತಕಗಳ ನೆರವಿನಿಂದ ಕೊಳವೆಯ ಪೆನ್ಸಿಲ್ ರಂಧ್ರವಿರುವ ತುದಿ ಮೇಜಿನ ಮೇಲ್ಮೈನಿಂದ ಸುಮಾರು ೩ ಸೆಂಮೀ ಎತ್ರದಲ್ಲಿ ಇರುವಂತೆಯೂ ಇನ್ನೊಂದು ತುದಿ ಕಾಗದದ ಪಥದಲ್ಲಿ ಇರುವಂತೆಯೂ ಸಜ್ಜುಗೊಳಿಸಿ (ಚಿತ್ರ ೬). ನಾಲ್ಕು ಗೋಲಿಗಳನ್ನು ಪಥದಲ್ಲಿ ಒಂದಕ್ಕೊಂದು ತಾಗಿರುವಂತೆ ಸಾಲಾಗಿ ಜೋಡಿಸಿ.

ಕೊಳವೆಯ ರಂಧ್ರದಲ್ಲಿ ಪೆನ್ಸಿಲ್ ತೂರಿಸಿದ ನಂತರ ಕೊಳವೆಯ ಮೇಲ್ತುದಿಯೊಳಕ್ಕೆ ಒಂದು ಗೋಲಿ ಹಾಕಿ. ಈ ಗೋಲಿ ಕೊಳವೆಯಲ್ಲಿ ಉರುಳದಂತೆ ಪೆನ್ಸಿಲ್ ತಡೆಯುವುದನ್ನು ಗಮನಿಸಿ. ಕೊಳವೆ ಅಲುಗಾಡದಂತೆ ಹಿಡಿದುಕೊಂಡು ಪೆನ್ಸಿಲನ್ನು ಹೊರಕ್ಕೆಳೆಯಿರಿ. ಉರುಳುತ್ತಾ ಕೊಳವೆಯಿಂದ ಹೊರಬಂದ ಗೋಲಿ ಪಥದಲ್ಲಿ ಜೋಡಿಸಿದ ಗೋಲಿಗಳ ಪೈಕಿ ಮೊದಲನೆಯದಕ್ಕೆ ಢಿಕ್ಕಿ ಹೊಡೆದಾಗ ಎಷ್ಟು ಗೋಲಿಗಳು ಎಷ್ಟು ದೂರ ಚಲಿಸಿದವು ಎಂಬುದನ್ನು ವೀಕ್ಷಿಸಿ. ಕೊಳವೆಯೊಳಗೆ ಅನುಕ್ರಮವಾಗಿ ೨, ೩ ಗೋಲಿಗಳನ್ನೂ ಪಥದಲ್ಲಿ ಅನುಕ್ರಮವಾಗಿ ೩, ೨ ಗೋಲಿಗಳನ್ನೂ ಇಟ್ಟು ಪ್ರಯೋಗ ಪುನರಾವರ್ತಿಸಿ. ೫ ಗೋಲಿಗಳನ್ನು ಪಥದಲ್ಲಿಯೂ ಕೊಳವೆಯಲ್ಲಿ ದೊಡ್ಡ ಗೋಲಿಯನ್ನೂ ಇಟ್ಟು ಪ್ರಯೋಗ ಪುನರಾವರ್ತಿಸಿ.

ನಿಮ್ಮ ವೀಕ್ಷಣೆಗಳನ್ನು ಸಂವೇಗ ಸಂರಕ್ಷಣ ತತ್ವದಿಂದ ವಿವರಿಸಲು ಪ್ರಯತ್ನಿಸಿ

Posted in ವಿಜ್ಞಾನ - ಮಾಡಿ ಕಲಿ | Tagged , | Leave a comment

ಸಹಜ ಸಾಮರ್ಥ್ಯ (ಆಪ್ಟಿಟ್ಯೂಡ್)

ಯಾವುದೇ ತರಬೇತಿಯ ಪೂರ್ಣ ಲಾಭವನ್ನು ಕೆಲವರು ಬಲು ಸುಲಭವಾಗಿ ಪಡೆಯುತ್ತಾರೆ, ಕೆಲವರು ಪಡೆಯುವುದಿಲ್ಲ. ಏಕೆ? ಉದಾಹರಣೆಗೆ, ಸಂಗೀತದಲ್ಲಿ ಯುಕ್ತ ತರಬೇತಿ ಕೊಟ್ಟರೆ ಕೆಲವರು ಮಾತ್ರ ಬಲು ಬೇಗನೆ ಕಲಿಯುತ್ತಾರೆ, ಎಲ್ಲರೂ ಅಲ್ಲ. ಸಂಗೀತ ಕಲಿಯಲು ಅಗತ್ಯವಾದ ಅಂತಸ್ಥ ಸಾಮರ್ಥ್ಯ ಬೇಗನೆ ಕಲಿತವರಲ್ಲಿ ಇದ್ದಿರಬೇಕಲ್ಲವೇ? ಅವರಿಗೆ ‘ನ್ಯಾಕ್’ ಇದ್ದದ್ದರಿಂದ ಬೇಗನೆ ಕಲಿತರು ಅಂದು ಹೇಳುವುದೂ ಉಂಟು. ಯಾವುದೇ ನಿರ್ದಿಷ್ಟ ಚಟುವಟಿಕೆಯನ್ನು ಕೈಗೊಳ್ಳಲು ಸಹಾಯಕವಾದ ಅಂತಸ್ಥ ಸಾಮರ್ಥ್ಯವೇ ಸಹಜಸಾಮರ್ಥ್ಯ, ಅರ್ಥಾತ್ ಆಡುಭಾಷೆಯಲ್ಲಿ ಉಲ್ಲೇಖಿಸುವ ‘ನ್ಯಾಕ್’. ‘ನಿರ್ದಿಷ್ಟ ಜ್ಞಾನವನ್ನು ಅಥವ ಕುಶಲತೆಯನ್ನು ಯುಕ್ತ ತರಬೇತಿ ದೊರೆತರೆ ಸುಲಭವಾಗಿ ಕಲಿಯಬಲ್ಲ ಸಾಮರ್ಥ್ಯ ಇದೆ ಎಂಬುದನ್ನು ಸೂಚಿಸುವ ವ್ಯಕ್ತಿಲಕ್ಷಣಗಳ ಸಂಯೋಜನೆ’ ಎಂದೂ ಸಹಜ ಸಾಮರ್ಥ್ಯವನ್ನು ವ್ಯಾಖ್ಯಾನಿಸುವುದುಂಟು.

ಸಹಜ ಸಾಮರ್ಥ್ಯ ಇದೆ ಅಂದರೆ ಯುಕ್ತ ಕಲಿಕಾನುಭವಗಳು ದೊರೆತರೆ ಸುಲಭವಾಗಿ ಕಲಿಯಬಲ್ಲ ಸಾಮರ್ಥ್ಯ ಇದೆ ಎಂದು ಅರ್ಥೈಸಬೇಕೇ ವಿನಾ ಕಲಿತಿದ್ದಾರೆ ಎಂದಲ್ಲ. ಉದಾಹರಣೆಗೆ, ಗಣಿತದಲ್ಲಿ ಅಥವ ಸಂಗೀತದಲ್ಲಿ ಸಹಜ ಸಾಮರ್ಥ್ಯ ಇದೆ ಅಂದರೆ ಯುಕ್ತ ಗಣಿತ ಅಥವ ಸಂಗೀತ ಶಿಕ್ಷಣ ದೊರೆತರೆ ಗಣಿತಜ್ಞ ಅಥವ ಸಂಗೀತಗಾರ ಆಗುವ ಸಾಮರ್ಥ್ಯ ಇದೆ ಎಂದು ಅರ್ಥೈಸಬೇಕೇ ವಿನಾ ಗಣಿತಜ್ಞ ಅಥವ ಸಂಗೀತಗಾರ ಆಗಿದ್ದಾರೆ ಎಂದಲ್ಲ. ತರಬೇತಿ ಅಥವ ಶಿಕ್ಷಣದಿಂದ ಲಾಭ ಪಡೆಯಬಲ್ಲರೋ ಇಲ್ಲವೋ ಎಂಬುದನ್ನು ಸಹಜ ಸಾಮರ್ಥ್ಯ ಸೂಚಿಸುತ್ತದೆಯೇ ವಿನಾ ಆ ಕ್ಷೇತ್ರದಲ್ಲಿ ಅವರು ಎಷ್ಟು ಖ್ಯಾತಿ ಗಳಿಸಬಲ್ಲರು ಅಥವ ಎಷ್ಟು ಹಣ ಸಂಪಾದಿಸಬಲ್ಲರು ಎಂಬುದನ್ನಲ್ಲ. ಅರ್ಥಾತ್, ಯಾವುದೇ ಕ್ಷೇತ್ರದಲ್ಲಿ ತಲುಪಬಹುದಾದ ಸಾಧನೆಯ ಮಟ್ಟವನ್ನು (ಲೆವೆಲ್ ಆಫ್ ಅಚೀವ್ ಮೆಂಟ್) ಸಹಜ ಸಾಮರ್ಥ್ಯ ಸೂಚಿಸುವುದಿಲ್ಲ.

ನಾವು ಅಪೇಕ್ಷಿಸುವ ಕ್ಷೇತ್ರದಲ್ಲಿ ಯುಕ್ತ ಅನುಭವಗಳನ್ನು ಒದಗಿಸುವುದರ ಮೂಲಕವೇ ಆಗಲಿ, ಯುಕ್ತ ಪರಿಸರವನ್ನು ಒದಗಿಸುವುದರ ಮೂಲಕವೇ ಆಗಲಿ ಆ ಕ್ಷೇತ್ರದಲ್ಲಿ ಮುಂದುವರಿಯಲು ಅಗತ್ಯವಾದ ಸಹಜ ಸಾಮರ್ಥ್ಯ ವಿಕಸಿಸುವಂತೆ ಮಾಡಬಹುದು ಅನ್ನಲು ಅಗತ್ಯವಾದಷ್ಟು ಪುರಾವೆಗಳು ಇಲ್ಲ. ಲಭ್ಯ ಪುರಾವೆಗಳನ್ನು ಆಧರಿಸಿ ಸಹಜ ಸಾಮರ್ಥ್ಯ ಆನುವಂಶೀಯ ಅನ್ನಲೂ ಸಾಧ್ಯವಿಲ್ಲ. ಬಹುಶಃ, ಅದು ಅನುವಂಶೀಯತೆ, ಪರಿಸರ, ಅನುಭವ, ಶಿಕ್ಷಣ ಇವುಗಳ ಸಂಕೀರ್ಣ ಅನ್ಯೋನ್ಯಕ್ರಿಯೆಯ ಫಲಿತವಾಗಿರಲೂ ಬಹುದು.

ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರಬಹುದಾದ ಸಹಜ ಸಾಮರ್ಥ್ಯಗಳನ್ನು ಗುರುತಿಸಬಲ್ಲ ಮಾನಕೀಕರಿಸಿದ (ಸ್ಟಾಂಡರ್ಡೈಸ್ಡ್) ಪರೀಕ್ಷೆಗಳು ಇವೆ. ಯುಕ್ತ ವಿದ್ಯಾರ್ಹತೆ ಉಳ್ಳ ಶೈಕ್ಷಣಿಕ ಸಲಹೆಗಾರರು ಇವುಗಳ ನೆರವಿನಿಂದ ವ್ಯಕ್ತಿ ಯಾವ ಕ್ಷೇತ್ರದಲ್ಲಿ ಇತರ ಕ್ಷೇತ್ರಗಳಿಗಿಂತ ಉನ್ನತ ಮಟ್ಟದ ಸಾಧನೆ ತೋರಬಹುದು ಎಂಬುದರ ಕುರಿತು ಸಲಹೆ ನೀಡುತ್ತಾರೆ. ದುರದೃಷ್ಟವಶಾತ್, ನಮ್ಮ ದೇಶದಲ್ಲಿ ಜನ್ಮದಾತೃಗಳು ತಾವು ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಕಲಿಯುವ ಸಾಮರ್ಥ್ಯ ತಮ್ಮ ಮಕ್ಕಳಿಗೆ ಇದೆ ಎಂದು ಭ್ರಮಿಸಿ ಶಿಕ್ಷಣ ಕೊಡಿಸಲು ಯತ್ನಿಸುವುದರಿಂದ ಸಮಸ್ಯೆಗಳು ಉದ್ಭವಿಸುತ್ತಿವೆ. ಇರುವ ಸಹಜ ಸಾಮರ್ಥ್ಯವನ್ನು ಸಾಧ್ಯವಿರುವಷ್ಟು ನಿಖರವಾಗಿ ಗುರುತಿಸಿ ಆ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಜೀವನ ಮಾರ್ಗ ಕಂಡುಕೊಳ್ಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ಅತ್ಯುತ್ತಮ.

Posted in ಶಿಕ್ಷಣ | Tagged , | Leave a comment